ಜಯನಗರ ಕ್ಷೇತ್ರ ಶೇ.51ರಷ್ಟು ಮತದಾನ;13ಕ್ಕೆ ಕುತೂಹಲಕ್ಕೆ ತೆರೆ
Team Udayavani, Jun 11, 2018, 6:47 PM IST
ಬೆಂಗಳೂರು:ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನದಿಂದ ತೆರವಾಗಿದ್ದ ಜಯನಗರ ಕ್ಷೇತ್ರಕ್ಕೆ ಸೋಮವಾರ ನಡೆದ ಉಪ ಚುನಾವಣೆಯ ಮತದಾನ ಅಂತ್ಯಗೊಂಡಿದ್ದು, ಸಂಜೆ 5ಗಂಟೆವರೆಗೆ ಶೇ.51ರಷ್ಟು ಮತದಾನವಾಗಿದೆ.
ಕಾಂಗ್ರೆಸ್, ಬಿಜೆಪಿ ಪಾಲಿಗೆ ಪ್ರತಿಷ್ಠೆಯ ಕಣವಾಗಿದ್ದ ಜಯನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ತಟಸ್ಥವಾಗಿದ್ದರು. ಕಾಂಗ್ರೆಸ್ ನಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಕಣದಲ್ಲಿದ್ದರೆ, ಬಿಜೆಪಿಯಿಂದ ಬಿಎನ್ ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರು ಅಖಾಡದಲ್ಲಿದ್ದಾರೆ. ಅಲ್ಲದೇ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ರವಿಕೃಷ್ಣಾ ರೆಡ್ಡಿ ಸೇರಿದಂತೆ 19 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಇದೀಗ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಜೂನ್ 13ರಂದು ನಡೆಯಲಿರುವ ಮತಎಣಿಕೆಯಲ್ಲಿ ಯಾರ ಕೊರಳಿಗೆ ಗೆಲುವಿನ ಹಾರ ಎಂಬುದು ಬಹಿರಂಗವಾಗಲಿದೆ.