ಮೈತ್ರಿ ಆಗಲಿ, ಬಿಡಲಿ, ಹಾಸನ ಸ್ಪರ್ಧೆ ಖಚಿತ
Team Udayavani, Feb 2, 2019, 2:00 AM IST
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಆದರೂ ಸರಿ, ಆಗದಿದ್ದರೂ ಸರಿ, ಹಾಸನದಲ್ಲಿ ಜೆಡಿಎಸ್ ಸ್ಪರ್ಧೆ ಖಚಿತ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಆ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಾಸನದಿಂದ ದೇವೇಗೌಡರು ಸ್ಪರ್ಧೆ ಮಾಡಿದರೆ ನಮ್ಮ ಬೆಂಬಲ, ಬೇರೆಯವರು ಸ್ಪರ್ಧೆ ಮಾಡಿದರೆ ಬೆಂಬಲ ನೀಡಲ್ಲ ಎಂದು ಹೇಳಿದ್ದ ಮಾಜಿ ಸಚಿವ ಎ.ಮಂಜು ಹೇಳಿಕೆಗೆ ರಾಜಕೀಯವಾಗಿಯೇ ‘ಟಾಂಗ್’ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತ್ರಿಕೋನ ಸ್ಪರ್ಧೆಗೂ ನಾವು ರೆಡಿ. ಮೈತ್ರಿ ವಿಚಾರ, ಟಿಕೆಟ್ ಹಂಚಿಕೆ ಬಗ್ಗೆ ದೇವೇಗೌಡರು ತೀರ್ಮಾನ ಕೈಗೊಳ್ಳುತ್ತಾರೆ. ಚುನಾವಣೆಯಿಂದ ಹೆದರಿ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ಮೈತ್ರಿ ಮಾಡಿಕೊಳ್ಳಿ ಎಂದು ಯಾರಿಗೂ ದುಂಬಾಲು ಬೀಳುವುದಿಲ್ಲ. ಯಾರ ಶಕ್ತಿ ಎಲ್ಲೆಲ್ಲಿ, ಎಷ್ಟಿದೆ ಎಂಬುದು ನಮಗೂ ಗೊತ್ತಿದೆ. ಹಾಸನದಲ್ಲಿ ದೇವೇಗೌಡರೇ ಸ್ಪರ್ಧೆ ಮಾಡಲಿ, ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತೇವೆ. ಅಲ್ಲಿ ಸ್ಪರ್ಧೆ ಬಗ್ಗೆ ಅಂತಿಮ ತೀರ್ಮಾನ ದೇವೇಗೌಡರದೇ. ಪ್ರಜ್ವಲ್ ಪಕ್ಷ ಸಂಘಟನೆ ಕೆಲಸ ಮಾಡುತ್ತಿದ್ದಾನೆ. ದೊಡ್ಡವರು ಹೇಗೆ ಹೇಳ್ತಾರೋ ಹಾಗೆ ಎಂದರು.
ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ, ಡಾ.ಜಿ.ಪರಮೇಶ್ವರ್, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಜೆಡಿಎಸ್ನಲ್ಲಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಎಚ್.ವಿಶ್ವನಾಥ್ ಅವರು ಕುಳಿತು, ಸಮಾಲೋಚನೆ ಮಾಡಿ ಮೈತ್ರಿ ಹಾಗೂ ಸೀಟು ಹಂಚಿಕೆ ಕುರಿತು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.
‘ಹಾಸನದಲ್ಲಿ ದೇವೇಗೌಡರು ಸ್ಪರ್ಧಿಸಿದರೆ ಮಾತ್ರ ನಮ್ಮ ಬೆಂಬಲ. ಸ್ಪರ್ಧಿಸದಿದ್ದರೆ ಕಾಂಗ್ರೆಸ್ಗೆ ಕ್ಷೇತ್ರ ಬಿಟ್ಟು ಕೊಡಬೇಕು ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಎ.ಮಂಜು, ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಈ ಹೇಳಿಕೆ ಬೆನ್ನಲ್ಲೇ ಹಾಸನದಲ್ಲಿ ಮಾತನಾಡಿದ್ದ ಭವಾನಿ ರೇವಣ್ಣ, ದೇವೇಗೌಡರು ಹಾಸನ ದಿಂದಲೇ ಸ್ಪರ್ಧಿಸಬೇಕು. ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಿ ಕಳುಹಿಸಿಕೊಡು ತ್ತೇವೆ. ಪ್ರಜ್ವಲ್ ಸ್ಪರ್ಧೆ ಬಗ್ಗೆ ದೇವೇಗೌಡರದೇ ಅಂತಿಮ ತೀರ್ಮಾನ ಎಂದಿದ್ದರು.