ಖಾತೆ ಬದಲಾವಣೆಗಾಗಿ ಜೆಡಿಎಸ್ ಸಚಿವರ ಕ್ಯಾತೆ:ಸಿಎಂ ಎಚ್ಡಿಕೆ ಕಿಡಿ
Team Udayavani, Jun 9, 2018, 1:47 PM IST
ಬೆಂಗಳೂರು : ಜೆಡಿಎಸ್ ಸಚಿವರಲ್ಲಿ ಖಾತೆ ಹಂಚಿಕೆ ಅಸಮಾಧಾನ ಕಂಡು ಬಂದಿದ್ದು, ಬೇರೆ ಖಾತೆಗಳಿಗಾಗಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಿಡಿ ಕಾರಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಎಚ್ಡಿಕೆ ಮೊದಲು ಮಂತ್ರಿಯಾಗಬೇಕು ಅಂತಾರೆ , ಬಳಿಕ ವಿಧಾನಸೌಧದ 3 ನೇ ಮಹಡಿಯಲ್ಲಿ ಕೊಠಡಿಯೇ ಬೇಕು ಅಂತಾರೆ, ಇಂತದ್ದೇ ಮನೆ ಬೇಕು, ಇಂತದ್ದೇ ಖಾತೆ ಬೇಕು ಅನ್ನುತ್ತಾರೆ ಎಂದು ಕಿಡಿ ಕಾರಿದರು.
ಸಮರ್ಥವಾಗಿ ಕೆಲಸ ಮಾಡಲು ಎಲ್ಲಾ ಇಲಾಖೆಗಳಲ್ಲೂ ಅವಕಾಶಗಳಿವೆ. ಖಾತೆ ಹಂಚಿಕೆ ಪಕ್ಷದ ಆಂತರಿಕ ತೀರ್ಮಾನ. ಕೆಲಸ ಮಾಡುವವರಿಗೆ ಯಾವ ಖಾತೆಯಾದರೇನು ? ಸಣ್ಣ ನೀರಾವರಿಗಿಂತ ಬೇರೆ ಖಾತೆ ಬೇಕೆ? ಉನ್ನತ ಶಿಕ್ಷಣಕ್ಕಿಂತ ಬೇರೆ ಖಾತೆ ಬೇಕೆ ಎಂದು ಪ್ರತಿಭಟನೆಗಿಳಿದಿರುವ ಜಿ.ಟಿ.ದೇವೇಗೌಡ ಮತ್ತು ಸಿ.ಎಸ್.ಪುಟ್ಟರಾಜು ಅವರ ಅಭಿಮಾನಿಗಳಿಗೆ ಪರೋಕ್ಷವಾಗಿ ಪ್ರಶ್ನಿಸಿದರು.
ನಾನೇನು ಓದಿದ್ದೇನೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಸುಭದ್ರ ಸರ್ಕಾರ !
ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ ಬೇಕು ಬೇಕಾದ ರೀತಿಯಲ್ಲಿ ಸರ್ಕಾರದ ಬಗ್ಗೆ ಸುದ್ದಿಯಾಗುತ್ತಿದೆ ಆದರೆ ನಿಮಗೆಲ್ಲಾ ನಿರಾಸೆ ಯಾಗುವುದು ಖಂಡಿದ ನಮ್ಮ ಸರ್ಕಾರ ಸುಭದ್ರವಾಗಿ 5 ವರ್ಷ ಪೂರೈಸುತ್ತದೆ ಎಂದರು.
ಪುಟ್ಟರಾಜು ಅಭಿಮಾನಿಗಳ ಪ್ರತಿಭಟನೆ
ಸಣ್ಣನೀರಾವರಿ ಖಾತೆ ಬದಲಾಯಿಸಬೇಕು ಎಂದು ಸಿ.ಎಸ್.ಪುಟ್ಟರಾಜು ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ ಪುಟ್ಟರಾಜು ಯಾವುದೇ ಅಸಮಾಧಾನವಿಲ್ಲ ಬೆಂಬಲಿಗರು ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದ್ದಾರೆ.
ಜಿಟಿಡಿ ಬೆಂಬಲಿಗರ ಹೋರಾಟ
ಉನ್ನತ ಶಿಕ್ಷಣ ಖಾತೆ ಬೇಡ. ಜಿಟಿಡಿ ಅವರಿಗೆ ಕಂದಾಯ ಖಾತೆ ನೀಡಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಜಿಟಿಡಿ ಪುತ್ರ ಹರೀಶ್ ಅವರು ಬೆಂಬಲಿಗರೊಂದಿಗೆ ಮಾತುಕತೆ ನಡೆಸಿ ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಾರೆ. ಜಿಟಿಡಿ ಅವರು ಪ್ರತಿಭಟನೆ ನಡೆಸದಂತೆ ಮನವಿ ಮಾಡಿದ್ದಾರೆ.