Karnataka Bandh: ರಾಜ್ಯಾದ್ಯಂತ ಬಿಗಿ ಭದ್ರತೆ, ಕಟ್ಟೆಚ್ಚರ
ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ, ಮುನ್ನೆಚ್ಚರಿಕೆ ಕ್ರಮ
Team Udayavani, Sep 28, 2023, 11:17 PM IST
ಬೆಂಗಳೂರು: ಶುಕ್ರವಾರ “ಕರ್ನಾಟಕ ಬಂದ್’ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳು ಸಹಿತ ರಾಜ್ಯದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಸ್ಥಳೀಯ ಪೊಲೀಸರ ಜತೆಗೆ 250 ಕೆಎಸ್ಆರ್ಪಿ,105 ಆರ್ಎಎಫ್, ಸಿಎಆರ್, ಡಿಎಆರ್ ಹಾಗೂ ಗೃಹ ರಕ್ಷಕ ದಳವನ್ನೂ ನಿಯೋಜಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಆಯುಕ್ತ ಹಿತೇಂದ್ರ ತಿಳಿಸಿದ್ದಾರೆ.
ಪ್ರಮುಖವಾಗಿ ಮೈಸೂರು, ಮಂಡ್ಯ, ರಾಮ ನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚುವರಿ ಕೆಎಸ್ಆರ್ಪಿ, ಆರ್ಎಎಫ್, ಸಿಎಆರ್ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯವ್ಯಾಪಿ ಕಟ್ಟೆಚ್ಚರ: ಬಂದ್ಗೆ ಅವಕಾಶವಿಲ್ಲ ಎಂದು ಸರಕಾರ ಹಾಗೂ ಪೊಲೀಸ್ ಇಲಾಖೆ ಹೇಳಿದ್ದರೂ ಸುಮಾರು 100ಕ್ಕೂ ಅಧಿಕ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ಜತೆಗೆ ಬಿಜೆಪಿ-ಜೆಡಿಎಸ್ ಕೂಡ ಬಂದ್ಗೆ ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅಹಿತಕರ ಘಟನೆ ಮತ್ತು ಘರ್ಷಣೆಗಳಿಗೆ ಅವಕಾಶ ನೀಡದಂತೆ ಭದ್ರತಾ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಕಾವೇರಿ ನೀರನ್ನು ಅವಲಂಬಿಸಿರುವ ಬೆಂಗಳೂರು, ಮೈಸೂರು, ರಾಮನಗರ, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಬಂದ್ ತೀವ್ರವಾಗಿರುವ ಸಾಧ್ಯತೆಯಿದೆ.
ಬಂದ್ ಬೆಂಬಲಿಸಲಿರುವ ಸಂಘಟನೆಗಳು
ವಾಟಾಳ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ಫಿಲಂ ಚೇಂಬರ್, ಸರಕಾರಿ ನೌಕರರ ಸಂಘ, ಕರ್ನಾಟಕ ತಮಿಳು ಸಂಘಟ ನೆಗಳ ಒಕ್ಕೂಟ, ಕರ್ನಾಟಕ ಜಲ ರಕ್ಷಣ ಸಮಿತಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬೆಂಗಳೂರು ವಕೀಲರ ಸಂಘ, ಕರ್ನಾಟಕ ರಾಜ್ಯ ಹೊಟೇಲ್ ಸಂಘ, ಉತ್ತರ ಕರ್ನಾಟಕ ಸಂಘಟನೆಗಳ ಮಹಾ ಒಕ್ಕೂಟ, ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ, ಕರ್ನಾಟಕ ರಾಜ್ಯ ಹೊಟೇಲ್ ಮಾಲಕರ ಸಂಘ, ಸಾರಿಗೆ ನೌಕರರ ಸಂಘ, ಡಾ| ರಾಜ್ ಕುಮಾರ್ ಅಭಿಮಾನಿಗಳ ಸಂಘ, ಕರವೇ ಶಿವರಾಮೇ ಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ದಲಿತ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು, ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘ, ಓಲಾ, ಉಬರ್ ಸಂಘ, ಆದರ್ಶ ಆಟೋ ಚಾಲಕರ ಸಂಘ, ಗೂಡ್ಸ್ ವಾಹನ, ಖಾಸಗಿ ವಾಹನ ಮಾಲಕರು, ಲಾರಿ ಮಾಲಕರು ಹಾಗೂ ಚಾಲಕರ ಸಂಘಗಳು, ಖಾಸಗಿ ಶಾಲಾ ವಾಹನ ಚಾಲಕರು, ಕಾವೇರಿ ಹೋರಾಟ ಸಮಿತಿ, ಕನ್ನಡ ಚಳವಳಿ ಕೇಂದ್ರ ಸಮಿತಿ, ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ, ಕನ್ನಡ ಸೇನೆ, ಜಯ ಕರ್ನಾಟಕ ಸಮರ ಸೇನೆ, ಕರು ನಾಡ ಸೇನೆ, ಖಾಸಗಿ ವಾಹನ ಮಾಲಕರ ಒಕ್ಕೂಟ, ಸ್ವಾಭಿಮಾನಿ ಸೇನೆ, ನಮ್ಮ ಕರುನಾಡು ಯುವ ಸೇನೆ, ಕನ್ನಡ ಸಂಘರ್ಷ ಸಮಿತಿ ಸಹಿತ ನೂರಾರು ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ.
ಚಿತ್ರರಂಗದ ಬೆಂಬಲ
ಕಾವೇರಿಗಾಗಿ ಸೆ.26ರಂದು ನಡೆದ ಬೆಂಗಳೂರು ಬಂದ್ ವೇಳೆ ಕನ್ನಡ ಚಿತ್ರರಂಗ ಅಷ್ಟಾಗಿ ಬೆಂಬಲ ಸೂಚಿಸಿಲ್ಲ ಎಂಬ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ಗೆ ಸಂಪೂರ್ಣ ಬೆಂಬಲ ನೀಡುವಂತೆ ಚಲನಚಿತ್ರ ಕಲಾವಿದರಿಗೆ ಮನವಿ ಮಾಡಲಾಗಿದ್ದು, ಫಿಲಂ ಚೇಂಬರ್ ಕೂಡ ಬೆಂಬಲ ಸೂಚಿಸಿರುವುದರಿಂದ ಶುಕ್ರವಾರದ ಪ್ರತಿಭಟನೆಯಲ್ಲಿ ಸಿನೆಮಾ ತಾರೆಯರು ಕೂಡ ಭಾಗವಹಿಸಲಿದ್ದಾರೆ. ಅದು ಚಿತ್ರೀಕರಣ ಹಾಗೂ ಸಿನೆಮಾ ಪ್ರದರ್ಶನ ಇರುವುದಿಲ್ಲ.
ಸೆ.29ರಂದು ಪ್ರಾಧಿಕಾರದ ಸಭೆ
ಶುಕ್ರವಾರದ ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಸಭೆಗೆ ಆನ್ಲೈನ್ ಬದಲಿಗೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾ ರಿಗಳಿಗೆ ಸೂಚಿಸಲಾಗಿದೆ. ತಮಿಳುನಾಡಿನವರು 11 ಸಾವಿರ ಸಾವಿರ ಕ್ಯುಸೆಕ್ ನೀರಿಗೆ ಬೇಡಿಕೆ ಇಟ್ಟಿದ್ದು, ರಾಜ್ಯದ ಅಧಿಕಾರಿ ಗಳು ಸಮರ್ಥವಾಗಿ ವಾದ ಮಂಡಿಸಲಿದ್ದಾರೆ. ರಾಜ್ಯದ ಬರ ಪರಿ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಈಗ ಸಹಜವಾಗಿ 2 ಸಾವಿರ ಕ್ಯುಸೆಕ್ ನೀರು ಹೋಗುತ್ತಿರಬಹುದು ಎಂದರು.
ಬಂದ್ಗೆ ಅವಕಾಶವಿಲ್ಲ, ಪ್ರತಿಭಟನೆಗೆ ಅಡ್ಡಿ ಇಲ್ಲ
ಬೆಂಗಳೂರು: ಕಾವೇರಿ ವಿಷಯದಲ್ಲಿ ಶುಕ್ರವಾರ ಪ್ರತಿಭಟಿಸಲು ಯಾರಿಗೂ ಅಡ್ಡಿ ಮಾಡುವುದಿಲ್ಲ. ಆದರೆ ಬಂದ್ಗೆ ಅವಕಾಶವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದ ಜತೆ ಮಾತನಾಡಿದ ಅವರು, ಬಂದ್ ವೇಳೆ ಸಾರ್ವಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಸುಪ್ರೀಂ ಕೋರ್ಟ, ಹೈಕೋರ್ಟ್ ಬಂದ್ ವಿಚಾರವಾಗಿ ಒಂದಷ್ಟು ಸೂಚನೆಗಳನ್ನು ನೀಡಿದ್ದು, ಅವನ್ನು ಪಾಲಿಸಬೇಕು. ದಯವಿಟ್ಟು ಕಾನೂನು ಪಾಲಿಸಿ. ಬಂದ್ ಮಾಡದೆ ಪ್ರತಿಭಟನೆ ಮಾಡಿ ಎಂದು ಜನರಲ್ಲಿ ಅವರು ಮನವಿ ಮಾಡಿದರು.
ಹೆದ್ದಾರಿ ತಡೆ; ಸಿಎಂ ನಿವಾಸಕ್ಕೆ ಮುತ್ತಿಗೆ
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಜಲ ಸಂರಕ್ಷಣ ಸಮಿತಿ ಸೆ.29ರಂದು ರಾಜ್ಯವ್ಯಾಪಿ ರಾಷ್ಟ್ರೀಯ ಮತ್ತು ರಾಜ ಹೆದ್ದಾರಿ ಬಂದ್ಗೆ ಕರೆ ನೀಡಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೆ ಹೆದ್ದಾರಿ ಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಮುಖ್ಯ ಮಂತ್ರಿಗಳ ಬೆಂಗಳೂರು ನಿವಾಸಕ್ಕೂ ನಿವಾಸಕ್ಕೂ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ಜಲ ಸಂರಕ್ಷಣ ಸಮಿತಿ ಸಂಯೋಜಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ಸರಕಾರಿ ಸೇವೆಗಳಲ್ಲಿ ವ್ಯತ್ಯಯ?
ಬಂದ್ಗೆ ಸರಕಾರಿ ನೌಕರರ ಸಂಘ ಬೆಂಬಲ ಸೂಚಿಸಿದ್ದು, ಶುಕ್ರವಾರ ಸರಕಾರಿ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿವೆ. ನಿರಂತರ ರಜೆಯಿಂದಾಗಿ ಸರಕಾರಿ ಸೇವೆ ವಾರಪೂರ್ತಿ ವ್ಯತ್ಯಯ ಆದಂತಾಗಲಿದೆ.
ನ್ಯಾಯಾಲಯ ಕೂಡ ಬಂದ್ ಮಾಡ ಬಾರದು ಎಂದು ಹೇಳಿದೆ. ಆದರೆ ಪ್ರತಿಭಟಿಸಬಹುದು. ಪ್ರತಿಭಟನೆ ಅವರ ವಿಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್ಗೆ ಬೆಂಬಲ ಕೊಟ್ಟಿವೆ.
-ಡಾ| ಜಿ. ಪರಮೇಶ್ವರ್,
ಗೃಹ ಸಚಿವರು.
ಕಾವೇರಿ ನದಿ ನೀರು ಬಗ್ಗೆ ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್ಗೆ ಬೆಂಬಲ ಇದೆ. ನಮ್ಮ ಒಕ್ಕೂಟವು ಈ ಹಿಂದೆ ಹಲವು ಬಾರಿ ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸಮಸ್ಯೆ ಉಂಟಾದಾಗಲೂ ಕನ್ನಡಪರ ಸಂಘಟನೆಗಳ ಜತೆಗೂಡಿ ಹೋರಾಟ ಮಾಡಿದೆ. ಈಗಲೂ ನಮ್ಮ ಬೆಂಬಲವಿದೆ.
-ಎಂ. ಫ್ರಾನ್ಸಿಸ್, ಅಧ್ಯಕ್ಷ, ಕರ್ನಾಟಕ ತಮಿಳು ಸಂಘಟನೆಗಳ ಒಕ್ಕೂಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ