ಕೊಪ್ಪಳದ ಹೋಟೆಲ್ಗೆ ದಲಿತರಿಗಿಲ್ಲ ಪ್ರವೇಶ!
Team Udayavani, Mar 8, 2017, 8:14 AM IST
ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದೊಂದು ತಿಂಗಳಿಂದ ಸವರ್ಣೀಯ-ದಲಿತರ ನಡುವೆ ಸಂಘರ್ಷ ನಡೆಯುತ್ತಿದೆ.
ಹೋಟೆಲ್, ಸಲೂನ್ ಬಂದ್ ಆಗಿವೆ. ಮಾಹಿತಿಯಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ತಲ್ಲೂರಿನಲ್ಲಿ 10 ದಲಿತ ಹಾಗೂ 270 ಸವರ್ಣೀಯ ಕುಟುಂಬಗಳಿವೆ. ಅಂದಾಜು 1800 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 2 ಸಣ್ಣ ಹೋಟೆಲ್ ಹಾಗೂ 2 ಸಲೂನ್ಗಳಿದ್ದವು. ಮೊದಲಿನಿಂದಲೂ ದಲಿತ ಯುವಕರಿಗೆ ಹೋಟೆಲ್ ಹೊರಗಡೆ ಟೀ, ಟಿಫನ್
ವ್ಯವಸ್ಥೆ ಇತ್ತು. ಆದರೆ, ಇತ್ತೀಚೆಗೆ ದಲಿತ ಯುವಕನೊಬ್ಬ ಹೋಟೆಲ್ ಹೊರಗೆ ಚಹಾ ಕುಡಿವ ಪದ್ಧತಿಯನ್ನು ಪ್ರಶ್ನಿಸಿ ಪ್ರವೇಶಕ್ಕೆ ಒತ್ತಾಯಿಸಿದ್ದಾನೆ. ಹೋಟೆಲ್ ಮಾಲೀಕರು ಪ್ರವೇಶ ನಿರ್ಬಂಧಿ ಸಿರುವುದು ಸಂರ್ಘಕ್ಕೆ ಕಾರಣವಾಗಿದೆ. ಹೋಟೆಲ್ ಸಂಪೂರ್ಣ ಬಂದ್ ಆಗಿದ್ದು, ಗ್ರಾಮಸ್ಥರು ಸುತ್ತಮುತ್ತಲಿನ ಊರುಗಳ ಹೋಟೆಲ್ಗಳಿಗೆ ಹೋಗುವಂತಾಗಿದೆ. ಯಲಬುರ್ಗಾ ತಹಶೀಲ್ದಾರ್, ತಾಪಂ
ಇಒ, ಗ್ರಾಪಂ ಪಿಡಿಒ ಹಾಗೂ ಇತರ ಅಧಿಕಾರಿಗಳಿಗೆ ತಲ್ಲೂರು ಗ್ರಾಮದ ಪರಿಸ್ಥಿತಿ ತಿಳಿದಿದ್ದರೂ ಇತ್ತ ತಲೆ ಹಾಕಿಲ್ಲ.
ತಲ್ಲೂರಿನಲ್ಲಿ ದಲಿತರಿಗೆ ಹೋಟೆಲ್ ಪ್ರವೇಶ ನಿರಾಕರಣೆ ಮಾಡಿದ ಕುರಿತು ನನಗೆ ಮಾಹಿತಿ ಇಲ್ಲ. ಕೂಡಲೇ ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.
ಎಂ. ಕನಗವಲ್ಲಿ, ಡಿಸಿ, ಕೊಪ್ಪಳ