ಆಯುರ್ ರಕ್ಷಾದಿಂದ ಕೋವಿಡ್ ಸೋಂಕು ತಡೆ ಸಾಧ್ಯ: ಡಾ| ಸಂತೋಷ್ ಗುರೂಜಿ
Team Udayavani, Oct 30, 2020, 1:10 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಆಯುರ್ವೇದ ಔಷಧದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೋವಿಡ್ – 19 ಸೋಂಕು ತಡೆಯಬಹುದು. ಇದಕ್ಕಾಗಿ ಆಯು ರ್ವೇದದ ಗಿಡಮೂಲಿಕೆ ಬಳಸಿ ಆಯುರ್ ರಕ್ಷಾ ಕಿಟ್ ಪರಿಚಯಿ ಸಲಾಗಿದೆ ಎಂದು ಆಯುರ್ವೇದ ವೈದ್ಯ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರು ತಿಳಿಸಿದರು.
ನಗರದ ಮಾಗಡಿ ರಸ್ತೆಯ ಭಾರತಿ ನಗರದಲ್ಲಿರುವ ಆಯುರಾಶ್ರಮದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಲ್ಲಿ ಮಾತನಾಡಿದ ಅವರು, ಆಯುರ್ ಆಶ್ರಮದಿಂದ ಆಯುರ್ವೇದದ ಪ್ರಾಚೀನ ಸೂತ್ರಗಳನ್ನು ಬಳಸಿ ಆಯುರ್ ರಕ್ಷಾ ಕಿಟ್ ತಯಾರಿಸಲಾಗಿದೆ. ಈ ಕಿಟ್ನಲ್ಲಿರುವ ಔಷಧವನ್ನು ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಎಲ್ಲ ವಯೋಮಾನ ದವರು, ಕೊರೊನೇತರರು ಹಾಗೂ ಸೋಂಕಿನ ಲಕ್ಷಣ ಇರುವವರೂ ಬಳಸಬಹುದು. ಇದು ಸುರಕ್ಷಿತ ಹಾಗೂ ಸೋಂಕು ತಡೆಯುವ ಲಕ್ಷಣ ಹೊಂದಿದೆ ಎಂದು ರಾಜ್ಯ ಆಯುಷ್ ಇಲಾಖೆ ಪ್ರಮಾಣೀಕರಿಸಿದೆ ಎಂದು ಹೇಳಿದರು.
ವಿಕ್ಟೋರಿಯಾದಲ್ಲಿ ಪ್ರಯೋಗ
ಈ ಕಿಟ್ ಅನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ಸೋಂಕಿತರ ಮೇಲೆ ಆಯುಷ್ ಇಲಾಖೆ ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಎಥಿಕ್ಸ್ ಕಮಿಟಿ ಮತ್ತು ಕೇಂದ್ರ ಸಿಟಿಆರ್ಐನಿಂದ ಅನುಮತಿ ಪಡೆದು ಪ್ರಯೋಗ ಮಾಡಲಾಗಿತ್ತು. ನಿಖರವಾದ ಮಾಹಿತಿ ತಿಳಿದುಕೊಳ್ಳಲು 15 ಮಂದಿ ಕೊರೊನಾ ಸೋಂಕಿತರಿಗೆ ಅಲೋಪಥಿ ಹಾಗೂ ಹಾಗೂ 15 ಮಂದಿಗೆ ಆಯುರ್ ರಕ್ಷಾ ಕ್ಯಾಪ್ಯೂಲ್ ನೀಡಲಾಗಿತ್ತು. ಆಯುರ್ ಔಷಧ ನೀಡಿದ ಕೇವಲ ನಾಲ್ಕು ದಿನಗಳಲ್ಲೇ ಶೇ.73.3ರಷ್ಟು ರೋಗದ ಲಕ್ಷಣಗಳು ಕಡಿಮೆಯಾಗಿ, ಏಳು ದಿನಗಳಲ್ಲಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ. ಆಯುರ್ವೇದ ಮದ್ದಿನಿಂದ ಗಣನೀಯವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಅಲ್ಲದೆ, ವ್ಯಾಧಿ ಕ್ಷಮತ್ವ ಗುಣ ವೃದ್ಧಿಗೂ ಸಹಕಾರಿಯಾಗಿದೆ ಎಂದು ಶ್ರೀಗಳು ಹೇಳಿದರು.