ಕುಮಟಳ್ಳಿ ಕಾಣೆಯಾಗಿದ್ದಾರೆ, ಹುಡುಕಿ ಕೊಡಿ!
Team Udayavani, Jul 18, 2019, 3:00 AM IST
ಅಥಣಿ: ಸ್ಥಳೀಯ ಶಾಸಕ ಮಹೇಶ ಕುಮಟಳ್ಳಿ ಕಳೆದೊಂದು ತಿಂಗಳಿಂದ ಕ್ಷೇತ್ರಕ್ಕೆ ಬಂದಿಲ್ಲ ಹಾಗೂ ವಿಧಾನಸಭೆ ಅಧಿ ವೇಶನದಲ್ಲೂ ಭಾಗಿ ಆಗದೆ ಕಣ್ಮರೆ ಆಗಿದ್ದಾರೆ. ಕಾಣೆ ಆಗಿರುವ ಶಾಸಕರನ್ನು ಹುಡುಕಿಕೊಡಿ ಎಂದು ಅಥಣಿ ಬ್ಲಾಕ್ ಕಾಂಗ್ರೆಸ್, ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಹೇಶ ಕುಮಟಳ್ಳಿ ಅವರ ಪರ ಪಕ್ಷದ ಎಲ್ಲ ಕಾರ್ಯಕರ್ತರು, ಮುಖಂಡರು ಹಾಗೂ ಮತದಾರರು ಶ್ರಮಿಸಿ ಅವರನ್ನು ಆಯ್ಕೆ ಮಾಡಲಾಗಿತ್ತು. ಸದ್ಯ ಅಥಣಿ ಮತಕ್ಷೇತ್ರ ಭೀಕರ ಬರಗಾಲದಿಂದ ತತ್ತರಿಸಿದೆ. ಜನರಿಗೆ ಕುಡಿಯುವ ನೀರು, ದನ-ಕರುಗಳಿಗೆ ಮೇವು ಇಲ್ಲದಂತಾಗಿದೆ. ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಇದ್ದು ಜನರ ಸಮಸ್ಯೆಗೆ ಸ್ಪಂದಿಸಬೇಕಾದ ಶಾಸಕರು ಕಾಣೆ ಆಗಿರುವುದರಿಂದ ಅಥಣಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮತದಾರರು ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ, ಕಾಣೆ ಆಗಿರುವ ಅಥಣಿ ಶಾಸಕರನ್ನು ಆದಷ್ಟು ಶೀಘ್ರವೇ ಪತ್ತೆ ಮಾಡಿ ಎಂದು ಬ್ಲಾಕ್ ಕಾಂಗ್ರೆಸ್ ಸಲ್ಲಿಸಿರುವ ದೂರಿನಲ್ಲಿ ಕೋರಲಾಗಿದೆ.