ಕನ್ನಡ ಮಾಧ್ಯಮ ಕಲಿಕೆ ಪ್ರಮಾಣ ಕುಂಠಿತಕ್ಕೆ ನೆಟ್ಟಿಗರು ಹೇಳಿದಿಷ್ಟು!
Team Udayavani, Jun 25, 2022, 11:45 AM IST
ಬೆಂಗಳೂರು: ವರ್ಷದಿಂದ ವರ್ಷಕ್ಕೆ ಕನ್ನಡ ಮಾಧ್ಯಮದಲ್ಲಿ ಕಲಿಯುವವರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ರಾಷ್ಟ್ರೀಯ ಸಾಧನ ಸಮೀಕ್ಷೆ ವರದಿ ಹೇಳಿದ್ದು, ಈ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಕೂ ನಲ್ಲಿ #ಕನ್ನಡಮಾಧ್ಯಮಕಲಿಕೆ ಎಂಬ ಹ್ಯಾಷ್ ಟ್ಯಾಗ್ ಅಡಿ ತಮ್ಮ ಆತಂಕವನ್ನು ಬಿಚ್ಚಿಟ್ಟಿದ್ದಾರೆ.
‘ಉದ್ಯೋಗದ ಕೊರತೆ, ಕನ್ನಡ ಅನ್ನದ ಭಾಷೆಯಾಗಿಲ್ಲ ಎನ್ನುವ ಕೂಗು. ಕನ್ನಡದಲ್ಲಿ ಅನ್ನ ಉಣ್ಣುವ ಜನರೇ ಇಲ್ಲದಿರುವ ಪ್ರಸಂಗ ಬರುವ ಮುಂಚೆ ಕನ್ನಡದಿಂದ ಹಿಡಿದು ಬಡಿದಾಡಿ ತಿನ್ನಲು ಸಜ್ಜಾಗಿರುವ ಕ್ಷೇತ್ರಕ್ಕೆ ಸರ್ಕಾರ, ಉದ್ಯಮ ನೆರವಾಗಬೇಕು’ ಎಂದು ಸಂಧ್ಯಾ ಎನ್ನುವವರು ಹೇಳಿದ್ದಾರೆ.
‘ಕನ್ನಡ ಮಾಧ್ಯಮದಲ್ಲಿ ಕಲಿಸದೇ ಇರಲು ಕಾರಣಗಳಿವೆ, ಬಹುಮುಖ್ಯವಾದದ್ದು ಮಗು ಇನ್ನೂ ಚಡ್ಡಿ ಹಾಕುವಾಗಲೇ ಮುಂದೆ ಕಾಲೇಜಿನಲ್ಲಿ ಇಂಗ್ಲೀಷ್ ಸಮಸ್ಯೆ ಆಗಬಾರದು ಎನ್ನುವ ಗಾಬರಿ-Ness. ಪ್ರತಿಷ್ಠೆ ಎರಡನೆಯದ್ದು, ಪ್ರತಿಷ್ಠೆಗಾಗಿ ಇಂಗ್ಲೀಷ್ ನಲ್ಲಿ ಅದೇನು ಸಿಕ್ಕತ್ತೋ ಗೊತ್ತಿಲ್ಲ. ಆದ್ರೆ ಕನ್ನಡ ಕಲಿಯದೆ ಮಿಕ್ಕೆಲ್ಲಾ ಭಾಷೆ ಅಚ್ಚುಕಟ್ಟಾಗಿ ಬರಲು ಸಾಧ್ಯವೇ ಇಲ್ಲ, ನಮ್ಮ ವಾತಾವರಣಕ್ಕೆ!’ ಎಂದು ವಾಹಿನಿ ಮಂಜರೇಕರ್ ಹೇಳಿದ್ದಾರೆ.
‘ಕನ್ನಡದ ಅಸ್ಮಿತೆ, ಕನ್ನಡಿಗರೇ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮಕ್ಕೆ ತಳ್ಳಿ ಕನ್ನಡ ಕಲಿಕೆಯಲ್ಲಿ ಹಿಂದೇಟು ಹಾಕುವಂತೆ ಮಾಡುತ್ತಿದ್ದಾರೆ, ಇತ್ತ ಕನ್ನಡವನ್ನೂ ಸರಿಯಾಗಿ ಕಲಿಯದೆ ಇಂಗ್ಲೀಷ್ ಕಲಿಕೆಗೂ ಒಗ್ಗಲಾರದೆ ಮಕ್ಕಳು ಪರಿತಪಿಸುವುದು ಯಾರಿಗೂ ತಿಳಿಯದ ವಿಷಯವಲ್ಲ’ ಎಂದು ದಿವ್ಯಾ ರಾಮಕೃಷ್ಣ ಎನ್ನುವವರು ಬರೆದುಕೊಂಡಿದ್ದಾರೆ.
‘ಕಡ್ಡಾಯವಾಗದಿದ್ದರೆ ಕನ್ನಡಿಗರ ಮಕ್ಕಳು ಕನ್ನಡ ಹೊರತುಪಡಿಸಿ ಮತ್ತೆಲ್ಲ ಭಾಷೆಗಳನ್ನು ಕಲಿತು ಕನ್ನಡವನ್ನೇ ಮರೆಯುವ ಪರಿಸ್ಥತಿ ಎದುರಾಗಲಿದೆ.’ ಎಂದು ಚಂದ್ರಿಕಾ ಹೆಗಡೆ ಅವರು ಭವಿಷ್ಯದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
‘ಸರ್ಕಾರಿ ಶಾಲೆಗಳು ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ ಸಫಲರಾಗಿವೆ, ಕಾಲಮಾನದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ವಿಫಲವಾಗಿವೆ. ಪ್ರೈವೇಟ್ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬ್ಯುಸಿನೆಸ್ ಮಾಡಲು ಮುಂದಾಗುತ್ತವಾ? ಮಠ ಮಾನ್ಯಗಳು ಮಾಡಬಹುದು, ಅವುಗಳು ಮಾಡುವುದು ಬ್ಯುಸಿನೆಸ್ ಅಲ್ಲವಲ್ಲ..ಆ ಕಾರಣಕ್ಕೆ’ ಎಂದು ವಿರೇಶ್ ಕೂ ಮಾಡಿದ್ದಾರೆ.