ರಾಷ್ಟ್ರಪತಿಗೆ ಬೇಕಾದರೂ ರಾಜೀನಾಮೆ ಕೊಡಲಿ
Team Udayavani, Jul 4, 2019, 3:03 AM IST
ಬೆಂಗಳೂರು: ಆನಂದ್ ಸಿಂಗ್ ರಾಜೀನಾಮೆ ಮಾತ್ರ ತಲುಪಿದ್ದು, ಅವರ ರಾಜೀನಾಮೆ ಕುರಿತು ಇದುವರೆಗೂ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ರಾಜ್ಯದ ಯಾವುದೇ ಪ್ರಜೆಗಳು ಆಕ್ಷೇಪ ಎತ್ತಿದರೂ ಆ ಬಗ್ಗೆ ವಿಚಾರಣೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಆನಂದ್ ಸಿಂಗ್ ತಮಗೆ ರಾಜೀನಾಮೆ ನೀಡಿದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿರುವ ಬಗ್ಗೆ ಪರೋಕ್ಷ ಅಸಮಾಧಾನ ಹೊರಹಾಕಿದರು. “ಬೇಕಾದರೆ ರಾಷ್ಟ್ರಪತಿಗೆ ರಾಜೀನಾಮೆ ಕೊಡಲಿ. ನಾನು ನನ್ನ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ನೀಡಬೇಕೆಂಬ ಕನಿಷ್ಠ ಜ್ಞಾನವಾದರೂ ಇರಬೇಕು. ಅದೂ ಇಲ್ಲದಿರುವುದು ನಮ್ಮ ದುರ್ದೈವ’ ಎಂದು ಬೇಸರ ವ್ಯಕ್ತಪಡಿಸಿದರು.
“ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಮತದಾರರಿಗೆ ಇಲ್ಲ. ಆದರೆ, ಅವರ ಅಭಿಪ್ರಾಯವನ್ನು ಹೇಳಲು ಅವಕಾಶ ಇದೆ. ಹೀಗಾಗಿ, ಸಾರ್ವಜನಿಕರು ಯಾವುದೇ ಶಾಸಕರ ರಾಜೀನಾಮೆಗೆ ಆಕ್ಷೇಪ ವ್ಯಕ್ತಪಡಿಸಿದರೂ, ಅದನ್ನು ಆಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ.
ನಾನು ನನ್ನ ಜವಾಬ್ದಾರಿಯನ್ನು ಕಾನೂನು ಪ್ರಕಾರ ನಿಭಾಯಿಸುತ್ತೇನೆ’ ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಬಂಡಾಯ ಶಾಸಕರ ವಿರುದ್ಧದ ವಿಪ್ ಉಲ್ಲಂಘನೆ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಇನ್ನೂ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ ಎಂದರು.