ಕ್ರೀಡಾ ಚಟುವಟಿಕೆ ಅಭ್ಯಾಸಕ್ಕೆ ಮಾತ್ರ ಸೀಮಿತ
Team Udayavani, May 21, 2020, 7:20 AM IST
ಬೆಂಗಳೂರು: ಲಾಕ್ ಡೌನ್ನಿಂದ ಸ್ಥಗಿತಗೊಂಡಿದ್ದ ಕ್ರೀಡಾ ಚಟುವಟಿಕೆಗಳ ಪುನಾರಂಭಕ್ಕೆ ಸರ್ಕಾರ ತೀರ್ಮಾನಿಸಿದ್ದು, ಈಜು , ಕಬಡ್ಡಿ, ಕುಸ್ತಿ, ಜಿಮ್ ಬಿಟ್ಟು ಉಳಿದ ಅಭ್ಯಾಸಕ್ಕೆ ಅನುಮತಿ ನೀಡಿದೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರೀಡಾ ಸಚಿವರೂ ಆಗಿರುವ ಸಿ.ಟಿ.ರವಿ, ಸಾಮಾಜಿಕ ಆಂತರ ಕಾಯ್ದುಕೊಂಡು ನಾಲ್ಕು ಕ್ರೀಡೆ ಹೊರತುಪಡಿಸಿ ಇತರೆ ಕ್ರೀಡಾ ಚಟುವಟಿಕೆಗಳ ಆಭ್ಯಾಸ, ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಮಾಸ್ಕ್, ಮತ್ತು ಸ್ಯಾನಿಟೈಸರ್ ಕಡ್ಡಾಯ ಎಂದು ಹೇಳಿದರು. ರಾಜ್ಯದ ಕೆಲ ನ್ಪೋರ್ಟ್ಸ್ ಕ್ಲಬ್ಗಳಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಸಹ ಇದ್ದು ಅದರ ಆರಂಭಕ್ಕೆ ಅವಕಾಶವಿಲ್ಲ. ಕೇವಲ ಕ್ರೀಡಾ ಚಟುವಟಿಕೆ ಅಭ್ಯಾಸಕ್ಕೆ ಮಾತ್ರ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದರೂ ಮಾಸ್ಕ್, ಸ್ಯಾನಿಟೈಸಿಂಗ್ ಕಡ್ಡಾಯ. ಆದರೆ, ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ,
ಸದಸ್ಯರಿಗೆ ಮಾತ್ರ ಅವಕಾಶ ಇರುತ್ತದೆ . ವಾಣಿಜ್ಯ ಚಟುವಟಿಕೆಗೆ ಅವಕಾಶ ಇರುವುದಿಲ್ಲ ಎಂದರು. ಕ್ರೀಡಾ ಚಟುವಟಿಕೆಯಲ್ಲಿ ಕೆಲ ವಿನಾಯಿತಿಗೆ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಲಾಗಿದೆ. ಆದರೆ, ಮೇ 31 ರವರೆಗೂ ಕಾಯುವಂತೆ ಹೇಳಿದ್ದಾರೆ. ಸದ್ಯಕ್ಕೆ ಇಷ್ಟು ಚಟು ವಟಿಕೆಗಳಿಗೆ ಮಾತ್ರ ಅವಕಾಶ. ಈ ಸಂಬಂಧ ಸುತ್ತೋಲೆ ಸಹ ಹೊರಡಿಸಲಾಗುವುದು ಎಂದು ಹೇಳಿದರು.
ಸಮರ್ಥನೆ: ಎಪಿಎಂಸಿ ಕಾಯ್ದೆ ತಿದ್ದುಪಡಿಗೆ ವಿರೋಧ ಕುರಿತು ಪ್ರತಿಕ್ರಿಯಿಸಿದ ಸಚಿವರು, ರೈತರ ಹಿತಾಸಕ್ತಿಗಾಗಿ ತಿದ್ದುಪಡಿ ಮಾಡಲಾಗಿದೆ. ಒಂದೊಮ್ಮೆ ನೂತನ ಕಾಯ್ದೆಯಿಂದ ತೊಂದರೆಯಾಗಿ ರೈತರಿಗೆ ಅನನುಕೂಲ ಆದರೆ ವಾಪಸ್ ಪಡೆಯಲಾಗುವುದು ಎಂದರು.