ಚಾಮುಂಡಿ ಸನ್ನಿಧಿಯಲ್ಲಿ ಕ್ಷಮೆ ಕೋರಿದ ಸಾ.ರಾ.ಮಹೇಶ್
Team Udayavani, Oct 19, 2019, 3:00 AM IST
ಮೈಸೂರು: “ನಿನ್ನ ಸನ್ನಿಧಿಯನ್ನು ನಮ್ಮ ರಾಜಕೀಯಕ್ಕೆ ಬಳಸಿಕೊಂಡಿದ್ದು ತಪ್ಪಾಗಿದೆ, ಕ್ಷಮಿಸು ತಾಯಿ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಅವರು ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕುಳಿತು ಪಶ್ಚಾತ್ತಾಪ ಪಟ್ಟಿದ್ದಾರೆ. ಜತೆಗೆ, ದೇವಿ ಮತ್ತು ನಾಡಿನ ಜನತೆಯ ಕ್ಷಮೆ ಕೋರಿದ್ದಾರೆ.
ಶುಕ್ರವಾರ ಬೆಳಗ್ಗೆ ಮತ್ತೆ ಚಾಮುಂಡಿಬೆಟ್ಟಕ್ಕೆ ತೆರಳಿದ ಸಾ.ರಾ.ಮಹೇಶ್, ದೇವಿಗೆ ವಿಶೇಷ ಪೂಜೆ ಹಾಗೂ ತಪ್ಪು ಕಾಣಿಕೆ ಸಲ್ಲಿಸಿದರು. ದೇವಿಯ ಮುಂದೆ ಕುಳಿತು, ನಿನ್ನ ಸನ್ನಿಧಿಯನ್ನು ನಮ್ಮ ವೈಯಕ್ತಿಕ ಹಾಗೂ ರಾಜಕೀಯಕ್ಕೆ ಬಳಸಿಕೊಂಡಿದ್ದು ತಪ್ಪಾಯಿತು. ಕ್ಷಮಿಸು ತಾಯೇ ಎಂದು ಕೈಮುಗಿದು ಬೇಡಿಕೊಂಡರು.ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿ, ದೇವಿ ಹಾಗೂ ನಾಡಿನ ಜನತೆಯ ಕ್ಷಮೆ ಕೋರುವುದಾಗಿ ತಿಳಿಸಿದರು.
ರಾಜಕೀಯ ಮೇಲಾಟಕ್ಕೆ ಚಾಮುಂಡಿಬೆಟ್ಟವನ್ನು ವೇದಿಕೆ ಮಾಡಿಕೊಂಡು ಮಾಜಿ ಸಚಿವ ಎಚ್.ವಿಶ್ವನಾಥ್ ಹಾಗೂ ಸಾ.ರಾ.ಮಹೇಶ್ ಅವರು ಗುರುವಾರ ಆಣೆ-ಪ್ರಮಾಣದ ಹೆಸರಲ್ಲಿ ಹೈಡ್ರಾಮಾ ನಡೆಸಿ, ಕಡೆಗೂ ಯಾರೊಬ್ಬರು ಆಣೆ-ಪ್ರಮಾಣಕ್ಕೆ ಮುಂದಾಗದೆ ಮಾಧ್ಯಮಗಳ ಎದುರು ಪರಸ್ಪರ ದೋಷಾರೋಪಣೆ ಮಾಡಿಕೊಂಡು ಬೆಟ್ಟದಿಂದ ಕಾಲ್ಕಿತ್ತಿದ್ದರು.