ಮಣಿಪಾಲ್ ಆಸ್ಪತ್ರೆ: ಟ್ರೇಕಿಯೋಟೋಮಿಗೆ ಒಳಗಾದ ಮಕ್ಕಳಿಗೆ ಮನೆಯಲ್ಲಿ ವೆಂಟಿಲೇಶನ್
Team Udayavani, Jun 1, 2022, 5:50 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಮಣಿಪಾಲ್ ಆಸ್ಪತ್ರೆಯು ಕೃತಕ ಉಸಿರಾಟ ಕೊಳವೆ ಅಳವಡಿಸುವ ಟ್ರೇಕಿಯೋಟೋಮಿ ಶಸ್ತ್ರ ಚಿಕಿತ್ಸೆಗೊಳಗಾದ ಮಕ್ಕಳಿಗೆ ಮನೆಯಲ್ಲಿ ವೆಂಟಿಲೇಶನ್ ಆರೈಕೆ ನೀಡಲು ಮುಂದಾಗಿದೆ.
ಮಂಗಳವಾರ ಆಸ್ಪತ್ರೆಯಲ್ಲಿ ಮಾತನಾಡಿದ ಮಕ್ಕಳ ಶ್ವಾಸನಾಳ ಮತ್ತು ಗಂಟಲು ಚಿಕಿತ್ಸಾ ಕೇಂದ್ರದ ನಿರ್ದೇಶಕ ಡಾ| ಇ.ವಿ. ರಮಣ್ ಅವರು, ಮಣಿಪಾಲ್ ಆಸ್ಪತ್ರೆಯು ಟ್ರೇಕಿಯೋಟೋಮಿ ಶಸ್ತ್ರಚಿಕಿತ್ಸೆಗೆಂದು ಏಷ್ಯಾ ಮತ್ತು ಆಪ್ರಿಕಾ ಖಂಡದಲ್ಲಿಯೇ ಮೊದಲ ಚಿಲ್ಡ್ರನ್ ಏರ್ವೆà ಆ್ಯಂಡ್ ಸ್ವಾಲೋವಿಂಗ್ ಸೆಂಟರ್ (ಸಿಎಎಸ್ಸಿ) ಎನ್ನುವ ವಿಶೇಷ ಘಟಕ ಆರಂಭಿಸಿದೆ. ಈ ಘಟಕವು ಕಳೆದ ಎರಡು ದಶಕಗಳಿಂದ ನವಜಾತ ಶಿಶುಗಳ ಉಸಿರಾಟ ಸಮಸ್ಯೆಗೆ ಕೃತಕ ಕೊಳವೆ ಅಳವಡಿಸುವ ಶಸ್ತ್ರಚಿಕಿತ್ಸೆ ನಡೆಸಿ ಆರೈಕೆ ಮಾಡುತ್ತಿದೆ ಎಂದು ಹೇಳಿದರು.
ಉತ್ತಮ ಫಲಿತಾಂಶ
ಸದ್ಯ ಈ ಶಸ್ತ್ರಚಿಕಿತ್ಸೆಗೊಳಗಾದ ಮಕ್ಕಳ ಆಸ್ಪತ್ರೆಯಲ್ಲಿರುವ ಅವಧಿ ಮತ್ತು ಆಸ್ಪತ್ರೆ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಮನೆಯಲ್ಲಿಯೇ ಆರೈಕೆ ನೀಡಲು ನಿರ್ಧರಿಸಿದೆ. ಪ್ರಾರಂಭಿಕ ಹಂತದಲ್ಲಿ 400ಕ್ಕೂ ಹೆಚ್ಚಿನ ಮಕ್ಕಳು ಮನೆಯಲ್ಲಿಯೇ ವೆಂಟಿಲೇಷನ್ ಸೇವೆಗಳನ್ನು ಪಡೆಯುತ್ತಿದ್ದು, ಮಕ್ಕಳ ಆರೋಗ್ಯ ಚೇತರಿಕೆಯಲ್ಲಿ ಉತ್ತಮ ಫಲಿತಾಂಶ ಕಂಡುಬಂದಿದೆ ಎಂದು ತಿಳಿಸಿದರು.
ನವಜಾತ ಶಿಶುಗಳಲ್ಲಿ ಶ್ವಾಸನಾಳ ಚಿಕ್ಕದಿದ್ದಾಗ ಅಥವಾ ಶ್ವಾಸನಾಳ ಮತ್ತು ಗಂಟಲು ಭಾಗದ ಮಾಂಸಖಂಡಗಳು ದುರ್ಬಲವಾಗಿದ್ದಾಗ ಉಸಿರಾಟ ಸಮಸ್ಯೆ ಉಂಟಾಗುತ್ತದೆ. ಇಂತಹ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಗಂಟಲಿನಿಂದ ನೇರವಾಗಿ ಶ್ವಾಸನಾಳಕ್ಕೆ ಕೃತಕ ಉಸಿರಾಟ ಕೊಳವೆಯನ್ನು ಅಳವಡಿಸಲಾಗುತ್ತದೆ ಎಂದು ಹೇಳಿದರು.
ಆಸ್ಪತ್ರೆಯ ನಿರ್ದೇಶಕ ಡಾ| ಮನಿಷ್ ರೈ, ಡಾ| ದೀಪಾ, ಡಾ| ಇಲಿನ್ ಕಿನಿಮಿ, ಶಸ್ತ್ರಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಉಪಸ್ಥಿತರಿದ್ದರು.