ಮಾನವೀಯತೆ ಮೆರೆದ ಸಚಿವ ಪುಟ್ಟರಾಜು
Team Udayavani, Dec 16, 2018, 10:27 AM IST
ಮೈಸೂರು: ಸುಳ್ವಾಡಿ ದುರಂತದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ತನ್ನ ತಾಯಿಯನ್ನು ನೋಡಲು ಬಂದ ಮಗಳ ಪರದಾಟ ಕಂಡ ಸಚಿವ ಸಿ.ಎಸ್.ಪುಟ್ಟರಾಜು ಅವರು, ತಮ್ಮದೇ ಸರ್ಕಾರಿ ವಾಹನದಲ್ಲಿ ಎಸ್ಕಾರ್ಟ್
ವಾಹನದೊಂದಿಗೆ ಆಕೆಯನ್ನು ಡಿಆರ್ಎಂ ಆಸ್ಪತ್ರೆಗೆ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ವಿಷ ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರನ್ನು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆಯಲ್ಲಿ ವಡ್ಡರದೊಡ್ಡಿ ಗ್ರಾಮದ ಮಹದೇವಮ್ಮ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದನ್ನು ತಿಳಿದು ಕೆ.ಆರ್.ಆಸ್ಪತ್ರೆಗೆ ಓಡೋಡಿ ಬಂದ ಅವರ ಮಗಳು ರಾಜೇಶ್ವರಿ, ತಾಯಿಯನ್ನು ಕಾಣದೆ ಕಂಗಾಲಾದರು. ಆ ವೇಳೆಗೆ ಮಹದೇವಮ್ಮನನ್ನು ಡಿಆರ್ಎಂ ಆಸ್ಪತ್ರೆಗೆ ದಾಖಲಿಸಿರುವ ವಿಚಾರ ತಿಳಿಯಿತು. ಆದರೆ, ಅಲ್ಲಿಗೆ ಹೇಗೆ ಹೋಗಬೇಕೆಂದು ತಿಳಿಯದೆ ಪೇಚಾಡುತ್ತಿದ್ದ ರಾಜೇಶ್ವರಿಯ ನೆರವಿಗೆ ಬಂದ ಸಚಿವ ಸಿ.ಎಸ್.ಪುಟ್ಟರಾಜು, ತಮ್ಮ ಸರ್ಕಾರಿ ವಾಹನದಲ್ಲೇ ಆಕೆಯನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು.