ಶಾಸಕ ಗೈರು: ಜೆಡಿಎಸ್ ನಾಯಕರಿಗೆ ಆತಂಕ
Team Udayavani, Feb 7, 2019, 12:25 AM IST
ಬೆಂಗಳೂರು: ಜಂಟಿ ಅಧಿವೇಶನಕ್ಕೆ ಜೆಡಿಎಸ್ನ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಗೈರು ಹಾಜರಾಗಿರುವುದು, ಇನ್ನೂ ಇಬ್ಬರು ಶಾಸಕರು ಬಿಜೆಪಿ ನಾಯಕರ ಸಂಪರ್ಕದ ಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿರುವುದು ಪಕ್ಷದ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ನಾರಾಯಣ ಗೌಡ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಅವರ ಮೊಬೈಲ್ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
ಈ ಮಧ್ಯೆ, ಗುರುಮಿಟ್ಕಲ್ ಶಾಸಕ ನಾಗನಗೌಡ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಸಹ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾ ಗಿದೆ. ಆದರೆ, ಇಬ್ಬರೂ ಅಧಿವೇಶನಕ್ಕೆ ಹಾಜರಾಗಿದ್ದರು.ಆಪರೇಷನ್ ಕಮಲ ಕಾರ್ಯಾಚರಣೆಗೆ ಜೆಡಿಎಸ್ನ ಯಾವ ಶಾಸಕರೂ ಬಲಿಯಾಗಲ್ಲ ಎಂದು ವಿಪ್ ಸಹ ನೀಡಿರಲಿಲ್ಲ.
ಹಿಂದೊಮ್ಮೆ ಕೆ.ಶ್ರೀನಿವಾಸಗೌಡ, ಅಶ್ವಿನ್ಕುಮಾರ್ ಅವರ ಹೆಸರು ಕೇಳಿ ಬಂದಿತ್ತಾದರೂ ಅವರು ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ತಮ್ಮ ನಿಷ್ಠೆ ಪ್ರದರ್ಶಿಸಿದ್ದರು. ಆದರೆ, ಸರ್ಕಾರಕ್ಕೆ ಅಗ್ನಿಪರೀಕ್ಷೆ ಎಂದೇ ಹೇಳಲಾಗಿದ್ದ ಜಂಟಿ ಅಧಿವೇಶನಕ್ಕೆ ಜೆಡಿಎಸ್ ಶಾಸಕ ನಾರಾಯಣಗೌಡ ಗೈರು ಆಗಿರುವುದು ನಾಯಕರಿಗೆ ತಲೆ ನೋವು ತಂದಿದೆ.
ಅನುದಾನ ತಾರತಮ್ಯಕ್ಕೆ ಮುನಿಸು?
ಮಂಡ್ಯ: ಅನುದಾನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಕಾರಣಕ್ಕೆ ಅನಾರೋಗ್ಯದ ನೆಪವೊಡ್ಡಿ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣ ಗೌಡರು ಬುಧವಾರದಿಂದ ಆರಂಭವಾದ ಜಂಟಿ ಸದನಕ್ಕೆ ಗೈರು ಹಾಜರಾಗಿರುವುದು ಜಿಲ್ಲಾ ರಾಜಕಾರಣ ದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಸದನಕ್ಕೆ ಬರಲಾಗುತ್ತಿಲ್ಲ ಎಂಬ ವಿಷಯವನ್ನು ಸ್ಪೀಕರ್ಗೆ ಪತ್ರ ಮುಖೇನ ಶಾಸಕ ಕೆ.ಸಿ.ನಾರಾಯಣಗೌಡ ಅವರು ತಿಳಿಸಿದ್ದಾರೆ. ನಾರಾಯಣಗೌಡರು ಬೆಂಗಳೂರಿ ನಲ್ಲಿರುವ ತಮ್ಮ ನಿವಾಸದಲ್ಲೇ ಉಳಿದಿ ದ್ದಾರೆ. ಚಳಿ ಜ್ವರದಿಂದ ಬಳಲುತ್ತಿರುವ ಸಂಗತಿಯನ್ನು ಕುಮಾರಸ್ವಾಮಿಗೆ ತಿಳಿಸಿದ್ದಾರೆ. ನಾರಾಯಣ ಗೌಡರಿಗೆ ಅನುದಾನ ಹಂಚಿಕೆ ವಿಚಾರದಲ್ಲಿ ಮುನಿಸಿರುವುದು, ಅದರ ಪರಿಹಾರಕ್ಕಾಗಿ ಈ ಮಾರ್ಗ ಅನುಸರಿಸಿರಬಹುದು ಎಂದು ಹೇಳಲಾಗುತ್ತಿದೆ. ನಾರಾಯಣಗೌಡರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಯಡಿಯೂರಪ್ಪ ಅವರನ್ನು ಬಾಯಿ ತುಂಬಾ ಹೊಗಳಿದ್ದರು.
ಈ ಕಾರಣಕ್ಕಾಗಿ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂಬ ಅನುಮಾನ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಈ ನಡುವೆ, ಕಾಂಗ್ರೆಸ್ ಅತೃಪ್ತ ಶಾಸಕರ ತಂಡ ಮುಂಬೈ ನಲ್ಲಿರುವ ಶಾಸಕ ನಾರಾಯಣ ಗೌಡರ ಮಾಲಿಕತ್ವದ ಹೋಟೆಲ್ ನಲ್ಲಿ ಆಶ್ರಯ ಪಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ.