ವೈದ್ಯಕೀಯ ತಪಾಸಣೆ, ಹಲ್ಲೆಕೋರ ಶಾಸಕ ಗಣೇಶ್ ಗೆ ಜೈಲು?ನಾಳೆ ಬೇಲ್ ಅರ್ಜಿ
Team Udayavani, Feb 21, 2019, 9:58 AM IST
ಬೆಂಗಳೂರು: ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿರುವ ಕಂಪ್ಲಿ ಶಾಸಕ ಗಣೇಶ್ ಗೆ ಗುರುವಾರ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ, ಸಂಜೆಯೊಳಗೆ ರಾಮನಗರ ನ್ಯಾಯಾಧೀಶ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಗಣೇಶ್ ಗೆ ಬಿಪಿ, ಶುಗರ್, ಇಸಿಜೆ ಸೇರಿದಂತೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ. ತಪಾಸಣೆ ಮುಗಿದ ಬಳಿಕ ರಾಮನಗರ ಕೋರ್ಟ್ ಗೆ ಬಿಡದಿ ಪೊಲೀಸರು ಹಾಜರುಪಡಿಸಲಿದ್ದಾರೆ. ಆದರೆ ಇಂದು ಗಣೇಶ್ ಪರವಾಗಿ ಜಾಮೀನು ಅರ್ಜಿ ಸಲ್ಲಿಸುವುದಿಲ್ಲ ಎಂದು ವಕೀಲರು ವಿವರಿಸಿದ್ದಾರೆ. ಬೆಂಗಳೂರಿನ ಜನಪ್ರತಿನಿಧಿ ನ್ಯಾಯಾಲಯದಲ್ಲಿ ನಾಳೆ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಆ ನಿಟ್ಟಿನಲ್ಲಿ ಇಂದು ರಾತ್ರಿ ಗಣೇಶ್ ಜೈಲಿನಲ್ಲಿಯೇ ಕಳೆಯುವ ಸಾಧ್ಯತೆ ಹೆಚ್ಚು. ಪ್ರಕರಣದಲ್ಲಿ ಗಣೇಶ್ ಗೆ ಜೈಲಾ ಅಥವಾ ಬೇಲಾ ಎಂಬುದು ಕಾದುನೋಡಬೇಕಾಗಿದೆ.
ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಹಾಗೂ ಕಂಪ್ಲಿ ಗಣೇಶ್ ಈಗಲ್ಟನ್ ರೆಸಾರ್ಟ್ ನಲ್ಲಿ ಮಾರಾಮಾರಿ ಹೊಡದುಕೊಂಡಿದ್ದರು. ಈ ಪ್ರಕರಣದಲ್ಲಿ ದೂರು ದಾಖಲಾದ ನಂತರ ಗಣೇಶ್ ತಲೆಮರೆಸಿಕೊಂಡಿದ್ದು, ಬುಧವಾರ ಪೊಲೀಸರು ಗುಜರಾತ್ ನ ಸೋಮನಾಥದಲ್ಲಿ ಬಂಧಿಸಿ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಕರೆತಂದಿದ್ದರು.