ಕಲಾಪಕ್ಕೆ ಚಕ್ಕರ್, ಚುನಾವಣಾ ಪ್ರಚಾರಕ್ಕೆ ಹಾಜರ್; ಸ್ಪೀಕರ್ ಗರಂ
Team Udayavani, Mar 27, 2017, 1:22 PM IST
ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರದ ಭರಾಟೆಯಿಂದಾಗಿ ಸೋಮವಾರ ವಿಧಾನಸಭೆ ಕಲಾಪದಲ್ಲಿ ಬಹುತೇಕ ಸಚಿವರು, ಶಾಸಕರು ಗೈರಾಗಿದ್ದರು. ಈ ಗೈರು ಹಾಜರಿ ಬಗ್ಗೆ ಸ್ಪೀಕರ್ ಕೆಬಿ ಕೋಳಿವಾಡ, ಬಿಜೆಪಿ ನಾಯಕ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಇಂದಿನ ಪ್ರಶ್ನೋತ್ತರ ಕಲಾಪವನ್ನು ಸ್ಪೀಕರ್ ಮಂಗಳವಾರಕ್ಕೆ ಮುಂದೂಡಿದರು.
ವಿಧಾನಸಭೆಯ ಕಲಾಪ ಆರಂಭವಾದಾಗ ಸದನದಲ್ಲಿ ಖಾಲಿ, ಖಾಲಿ ಕುರ್ಚಿಗಳೇ ಕಾಣಿಸಿದ್ದನ್ನು ಕಂಡು, ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ತೀವ್ರ ಬರಗಾಲ ಕಾಡುತ್ತಿದೆ. ಆದರೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಉಪಚುನಾವಣೆಯ ಪ್ರಚಾರವೇ ಮುಖ್ಯವಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.
ಶಾಸಕರು, ಸಚಿವರ ದಂಡು ನಂಜನಗೂಡು, ಗುಂಡ್ಲುಪೇಟೆಯಲ್ಲಿ ಬೀಡು ಬಿಟ್ಟಿದೆ. ಸದನದಲ್ಲಿ ಸಚಿವರೇ ಇಲ್ಲದ ಮೇಲೆ ಕಲಾಪ ಯಾರಿಗೆ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಸ್ಪೀಕರ್ ಕೆಬಿ ಕೋಳಿವಾಡ ಅವರು ಅಸಮಾಧಾನವ್ಯಕ್ತಪಡಿಸಿ, ಬಜೆಟ್ ಮೇಲೆ ಹೆಚ್ಚು ಮಂದಿ ಸಚಿವರು ಮಾತನಾಡಲಿ ಎಂಬ ಉದ್ದೇಶದಿಂದ ಇಂದಿನ ಪ್ರಶ್ನೋತ್ತರ ಕಲಾಪವನ್ನು ನಾಳೆಗೆ ಮುಂದೂಡಿದ್ದೇನೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದು ಹೇಳಿದರು.