ಜೆಡಿಎಸ್ ಸೋಲಿಗೆ ವರಿಷ್ಠರೇ ಜವಾಬ್ದಾರರು: ಮರಿತಿಬ್ಬೇಗೌಡ
Team Udayavani, Jun 16, 2022, 9:19 PM IST
ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಜೆೆಡಿಎಸ್ ಅಭ್ಯರ್ಥಿ ಎಚ್.ಕೆ.ರಾಮು ಸೋಲಿನ ಹೊಣೆಯನ್ನು ಪಕ್ಷದ ವರಿಷ್ಠರು, ನಾಯಕರು ಹೊರಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇದು ಎಚ್.ಕೆ.ರಾಮು ಸೋಲಲ್ಲ. ಸೋಲಿಗೆ ವರಿಷ್ಠರೇ ಜವಾಬ್ದಾರರು. ವರಿಷ್ಠರ ನಿರ್ಧಾರದಿಂದಲೇ ದಕ್ಷಿಣ ಪದವೀಧರರ ಕ್ಷೇತ್ರವನ್ನು ಜೆಡಿಎಸ್ ಕಳೆದುಕೊಳ್ಳಬೇಕಾಯಿತು ಎಂದರು.
ಲೋಕಸಭೆ ಚುನಾವಣೆ ನಂತರ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ವರಿಷ್ಠರು ಕಾರ್ಯಕರ್ತರನ್ನು ವಿಶ್ವಾಸದಿಂದ ನಡೆಸಿಕೊಂಡಿಲ್ಲ. ಪ್ರಾದೇಶಿಕ ಪಕ್ಷ ಉಳಿಯಬೇಕಾದರೆ ವರಿಷ್ಠರು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ದೇವೇಗೌಡರು ಕರೆದರೆ ಹೋಗಿ ಮಾತಾಡುತ್ತೇನೆ. ಆದರೆ ಪಕ್ಷದ ವಿಚಾರಗಳನ್ನು ಅವರ ಬಳಿ ಚರ್ಚಿಸಿದಾಗ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಶಾಸಕ ಸ್ಥಾನದ ಅವಧಿ ಮುಗಿಯುವ ತನಕ ನಾನು ಪಕ್ಷದಲ್ಲಿರುತ್ತೇನೆ. ಮುಂದೆಯೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಆದರೆ ಜೆಡಿಎಸ್ನಿಂದಲ್ಲ. ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದರು.