“ನನ್ನ ಶಾಲೆ ನನ್ನ ಕೊಡುಗೆ’ ಫೆ. 14ರಂದು ಮುಖ್ಯಮಂತ್ರಿಗಳಿಂದ ಚಾಲನೆ
ಸಿಎಸ್ಆರ್ ಅನುದಾನ ಸದ್ಬಳಕೆಗೆ ಆ್ಯಪ್
Team Udayavani, Feb 10, 2022, 7:20 AM IST
ಬೆಂಗಳೂರು: ರಾಜ್ಯದ ಸರಕಾರಿ ಶಾಲೆಗಳಿಗೆ ಮೂಲ ಸೌಕರ್ಯ, ಶಿಕ್ಷಕರ ಕೊರತೆ ನೀಗಿಸುವುದು, ಕಲಿಕಾ ಚಟುವಟಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರೇತರ ಸಂಸ್ಥಗೆಳ (ಎನ್ಜಿಒ) ಸಾಮಾಜಿಕ ಹೊಣೆಗಾರಿಕಾ ನಿಧಿ (ಸಿಎಸ್ಆರ್) ಅನುದಾನವನ್ನು “ನನ್ನ ಶಾಲೆ ನನ್ನ ಕೊಡುಗೆ’ ಯೋಜನೆ ಅಡಿ ಸಮರ್ಪಕವಾಗಿ ಬಳಸಿಕೊಳ್ಳಲು ಶಿಕ್ಷಣ ಇಲಾಖೆಯು ನೂತನ ಆ್ಯಪ್ ಪೋರ್ಟಲ್ ಅನ್ನು ಸಿದ್ಧಪಡಿಸಿದೆ.
ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಅವಶ್ಯ ವಿರುವ ಸೌಲಭ್ಯದ ಮಾಹಿತಿ ಆ್ಯಪ್ನಲ್ಲಿ ಲಭ್ಯವಾಗಲಿದೆ. ದಾನಿಗಳು ಹಣದ ಮೂಲಕ ಅಥವಾ ಶಾಲೆಗಳಿಗೆ ಅವಶ್ಯವಿರುವ ಸೌಲಭ್ಯ ಗಳನ್ನು ಕಲ್ಪಿಸುವ ಮೂಲಕವೂ ಸೌಲಭ್ಯ ಕಲ್ಪಿಸಬಹು ದಾಗಿದೆ. ಈ ಆ್ಯಪ್ ಅನ್ನು ಫೆ. 14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ದುರ್ಬಳಕೆ ತಡೆ
ವಿವಿಧ ಸರಕಾರೇತರ ಸಂಸ್ಥೆಗಳೊಂದಿಗೆ ನಡೆಸಿದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೈಕ್ಷಣಿಕ ಗುಣಮಟ್ಟ ಹೆಚ್ಚಳ ಮಾಡುವ ಉದ್ದೇಶದಿಂದ ಸುಮಾರು 75ರಿಂದ 80 ಎನ್ಜಿಒಗಳು ಹಾಗೂ ಕಂಪೆನಿಗಳು ಬಂದಿವೆ. ಅವರಿಗೆ ವೇದಿಕೆ ಕಲ್ಪಿಸಿಕೊಡುವ ಜತೆಗೆ ಅನುದಾನ ದುರ್ಬಳಕೆ ತಡೆಗಟ್ಟುವ ಉದ್ದೇಶದಿಂದ ವೇದಿಕೆ ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕ್ಷಣದಲ್ಲಿ ಸಂಬಂಧಪಟ್ಟ ಶಾಲೆಗಳ ಮಾಹಿತಿಯನ್ನು ಮುಕ್ತವಾಗಿ ನೋಡಬಹುದಾಗಿದೆ ಎಂದು ಹೇಳಿದರು.
ಕೆಲವು ಎನ್ಜಿಒಗಳು ಶಾಲೆಗಳಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕೆಂಬ ಮನಸ್ಸು ಹೊಂದಿರುತ್ತವೆ. ಆದರೆ, ಏನು ಮಾಡಬೇಕೆಂಬ ಗೊಂದಲ ವಿರುತ್ತದೆ. ಈ ಆ್ಯಪ್ ಮೂಲಕ ರಾಜ್ಯಾದ್ಯಂತ ಸರಕಾರಿ ಶಾಲೆಗಳಲ್ಲಿ ಆವಶ್ಯವಿರುವ ಸೌಲಭ್ಯದ ಮಾಹಿತಿ ಲಭ್ಯವಾಗಲಿದೆ. ಸಂಬಂಧಪಟ್ಟ ಕಂಪೆನಿ ಗಳು ತಾವು ನೀಡಲಿಚ್ಛಿಸುವ ಸೌಲಭ್ಯವನ್ನು ಶಾಲೆ ಗಳಿಗೆ ನೀಡಬಹುದು ಎಂದು ತಿಳಿಸಿದರು.
100 ಶಾಲೆ ಅಭಿವೃದ್ಧಿ
2024-25ರ ವೇಳೆಗೆ 100 ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ವರ್ಷಕ್ಕೆ ಕನಿಷ್ಠ 16 ಶಾಲೆಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಅಮೃತ ಮಹೋತ್ಸವ ಅಂಗವಾಗಿ 75 ಶಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದ್ದು, ಶಾಲೆಗಳಿಗೆ ತಲಾ 10 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಹೆಚ್ಚಿನ ಮಕ್ಕಳು ಇರುವ ಶಾಲೆಗಳು, ಮಳೆ ಹಾನಿಗೆ ಒಳಗಾಗಿ ತುರ್ತಾಗಿ ದುರಸ್ತಿಯಾಗಬೇಕಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಆಯುಕ್ತ ಡಾ| ಆರ್. ವಿಶಾಲ್ ತಿಳಿಸಿದರು.
80 ಎನ್ಜಿಗಳ ಪಾಲ್ಗೊಳ್ಳುವಿಕೆ
ಐಬಿಎಂ, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ 80 ಎನ್ಜಿಒಗಳು “ನನ್ನ ಶಾಲೆ ನನ್ನ ಕೊಡುಗೆ’ಗೆ ಕೈಜೋಡಿಸಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ| ಆರ್. ವಿಶಾಲ್ ಮಾಹಿತಿ ನೀಡಿದರು.
ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳಿಗೂ ಉತ್ತಮ ಸೌಲಭ್ಯ ಕಲ್ಪಿಸ ಬೇಕು ಎನ್ನುವುದು ಶಿಕ್ಷಣ ಇಲಾಖೆ ಉದ್ದೇಶ ವಾಗಿದೆ. ಈ ಹಿನ್ನೆಲೆಯಲ್ಲಿ ಎನ್ಜಿಒ ಗಳಿಗೆ ವೇದಿಕೆ ಕಲ್ಪಿಸಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಮುಂದಾಗಿದ್ದೇವೆ.
– ಬಿ.ಸಿ. ನಾಗೇಶ್,
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ