ನೆಲಮಂಗಲ:ಅಪಘಾತವಾಗಿ ಶವವಾಗಿ ಬಿದ್ದವರ ಚಿನ್ನಾಭರಣ,ಹಣ ಕಳವು
Team Udayavani, May 29, 2018, 12:09 PM IST
ನೆಲಮಂಗಲ: ರಾಷ್ಟ್ರೀಯ ಹೆದ್ದಾರಿ 4 ರ ತಿಪ್ಪಗೊಂಡನ ಹಳ್ಳಿ ಬಳಿ ನಿಂತಿದ್ದ ಲಾರಿಗೆ ಕೆಎಸ್ಆರ್ಟಿಸಿ ಬಸ್ ಢಿಕ್ಕಿಯಾದ ಪರಿಣಾಮ ವೃದ್ಧ ದಂಪತಿಗಳಿಬ್ಬರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಮಂಗಳವಾರ ನಡೆದಿದೆ.
ಅಪಘಾತವಾಗಿ ಬಿದ್ದಿದ್ದ ವೇಳೆ ಸಮಯಸಾಧಕರು ವೃದ್ಧರ ಶವದ ಬಳಿಯಿದ್ದ ಚಿನ್ನಾಭರಣ, ಹಣ ಮತ್ತು ಗುರುತಿನ ಚೀಟಿಯನ್ನೂ ದೋಚಿ ಹೇಯ ಕೃತ್ಯ ಎಸಗಿದ್ದಾರೆ.
ತರೀಕೆರೆಯಲ್ಲಿ ಬಸ್ ಹತ್ತಿದ್ದಾರೆ ಎನ್ನಲಾದ ದಂಪತಿ ಬೆಂಗಳೂರಿನತ್ತ ತೆರಳುತ್ತಿದ್ದರು. ಅವರ ಗುರುತು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.
ಅವಘಡದಲ್ಲಿ ನಿರ್ವಾಹಕ ಸೇರಿ ಇನ್ನೂ ಐವರು ಪ್ರಯಾಣಿಕರು ಗಾಯಗೊಂಡಿದ್ದು ನೆಲಮಂಗಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಳಿಕ ಬಸ್ ಚಾಲಕ ಕರೇ ಗೌಡ ಸ್ಥಳದಿಂದ ಪರಾರಿಯಾಗಿದ್ದಾನೆ.
ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.