ಸಂಪುಟ ಪುನಾರಚನೆಯೂ ಇಲ್ಲ, ಸಿಎಂ ಬದಲಾವಣೆಯೂ ಇಲ್ಲ: ನಳಿನ್ ಕಟೀಲ್
Team Udayavani, Dec 25, 2021, 2:59 PM IST
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ ಚುನಾವಣೆಯಲ್ಲಿ ನಾವೆಲ್ಲಾ ಒಟ್ಟಾಗಿ ಹೋಗುತ್ತೇವೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ನೇತೃತ್ವ, ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಲಿದೆ. ಸಿಎಂ ಬದಲಾವಣೆ ಕೇವಲ ಊಹಾಪೋಹ, ಕಪೋಲಕಲ್ಪಿತ ಕತೆ. ಬೊಮ್ಮಾಯಿ ಪೂರ್ಣಪ್ರಮಾಣದಲ್ಲಿ ಸರ್ಕಾರವನ್ನು ನಡೆಸಲಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಪುನಾರಚನೆಯೂ ಇಲ್ಲ. ವಿವಿಧ ಕಾರಣಕ್ಕೆ ಖಾಲಿ ಇರುವ ಸ್ಥಾನಗಳನ್ನು ತುಂಬುವ ಕೆಲಸವನ್ನು ಮಾತ್ರ ಮಾಡುತ್ತೇವೆ ಎಂದು ನಳಿನ್ ಕಟೀಲ್ ಹೇಳಿದರು.
ವಿಮರ್ಶೆ ಮಾಡುತ್ತೇವೆ: ಬೆಳಗಾವಿ ಸೋಲಿನ ಬಗ್ಗೆ ಅವಲೋಕನ ಮಾಡಲಾಗಿದೆ. ಸಭೆ ನಡೆಸಿ ಎಲ್ಲಾ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಇನ್ನೊಮ್ಮೆ ಸಭೆ ನಡೆಸಿ ಸೋಲಿನ ಕುರಿತು ಆತ್ಮಾವಲೋಕನ ಮಾಡಲಿದ್ದೇವೆ. ನಮ್ಮ ಗುರಿ ಇದ್ದಿದ್ದು ಹತ್ತು ಸ್ಥಾನ ಆದರೆ 11 ಸ್ಥಾನ ಗೆದ್ದಿದ್ದೇವೆ. ಸೋತ ಕ್ಷೇತ್ರದ ಕಡೆಯೂ ವಿಮರ್ಶೆ ಮಾಡುತ್ತೇವೆ. ಎಲ್ಲ ವರದಿ ಹೈಕಮಾಂಡ್ ಗೆ ನೀಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
150 ಸ್ಥಾನದ ಗುರಿ: ಹೈಕಮಾಂಡ್ ನಮಗೆ ಯಾವ ಟಾಸ್ಕ್ ನೀಡಿಲ್ಲ, ಮುಂದಿನ ಚುನಾವಣೆಯನ್ನು ಗೆಲ್ಲುವುದೇ ನಮ್ಮ ಟಾಸ್ಕ್ .150 ಸ್ಥಾನದ ಗುರಿಯೊಂದಿಗೆ ಹೊರಟಿದ್ದೇವೆ, ಗುರಿ ತಲುಪುತ್ತೇವೆ ಎಂದರು.
ಕಾಂಗ್ರೆಸ್ ವಿರೋಧಕ್ಕಾಗಿ ಇರುವ ಪಕ್ಷ. ಸಿಎಎ ತರಲು ಅವರೇ ಹೋರಾಟ ಮಾಡಿ ನಾವು ತಂದಾಗ ವಿರೋಧ ಮಾಡಿದರು. ಕೃಷಿ ಕಾನೂನು ತರಲು ಪ್ರಣಾಳಿಕೆಯಲ್ಲಿ ಅವರೇ ಹೇಳಿದ್ದರು, ಅದನ್ನು ನಾವು ತಂದಾಗ ಕಾಯ್ದೆ ವಿರುದ್ಧ ಹೋರಾಟ ಮಾಡಿದರು. ಕೊರೊನಾ ಬಂದಾಗ ಲಸಿಕೆ ಇಲ್ಲ ಎಂದು ಬೊಬ್ಬೆ ಹೊಡೆದರು ಲಸಿಕೆ ಕೊಟ್ಟಾಗ ಪಡೆಯಲಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ:ಸಮಾಜ ವಿರೋಧಿ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ: ಪ್ರಹ್ಲಾದ ಜೋಶಿ
ಕಾಂಗ್ರೆಸ್ ಗೆ ಮತಾಂತರ ಕಾಯ್ದೆ ವಿರೋಧಿಸುವ ನೈತಿಕತೆ ಇಲ್ಲ. 2016ರಲ್ಲಿ ಸಿದ್ದರಾಮಯ್ಯನವರೇ ಸಹಿ ಹಾಕಿದ್ದರು. ಕ್ಯಾಬಿನೆಟ್ಟಿಗೆ ತರಬೇಕು ಎಂದು ಅವರೇ ಆದೇಶಿಸಿದ್ದರು. ಎಂಥ ಮರೆವು ಸಿದ್ದರಾಮಯ್ಯನವರಿಗೆ! ಇದು ಕುರುಡು ಮರೆವಾ, ಜಾಣ ಮರೆವಾ? ಅಧಿಕಾರ ಇದ್ದಾಗ ಒಂದು ಇಲ್ಲದಾಗ ಒಂದು ರೀತಿಯ ವರ್ತನೆ. ಇದು ಆರೆಸ್ಸೆಸ್ ಅಜೆಂಡಾ ಆಗಿದ್ದರೆ ಸಿದ್ದರಾಮಯ್ಯ ಆರ್ ಎಸ್ಎಸ್ ಅಜೆಂಡಾದ ಅನುಷ್ಠಾನಕ್ಕೆ ಮುಂದಾಗಿದ್ದಾರಾ? ಅವರೇ ಆರೆಎಸ್ಎಸ್ ಅಜೆಂಡಾವನ್ನು ಜಾರಿಗೆ ತರಲು ಬಂದಿದ್ದಾಗ ನಾವು ಪರಿವಾರದವರು, ನಾವು ಜಾರಿಗೆ ತರಲೇಬೇಕಲ್ಲವೇ ಎಂದು ನಳಿನ್ ಕಟೀಲ್ ತಿರುಗೇಟು ನೀಡಿದರು.