ಮಠ, ದೇಗುಲ ಸರಕಾರೀಕರಣ ಇಲ್ಲ!: ಪರಿಷತ್ನಲ್ಲಿ ಸಿಎಂ ಸ್ಪಷ್ಟನೆ
Team Udayavani, Feb 8, 2018, 12:20 PM IST
ಬೆಂಗಳೂರು : ‘ಮಠ ಮತ್ತು ಮಠಗಳ ವಶದಲ್ಲಿರುವ ಹಿಂದೂ ದೇವಾ ಲಯಗಳನ್ನು ನಿಯಂತ್ರಿಸುವ ಉದ್ದೇಶ ರಾಜ್ಯ ಸರಕಾರದ ಮುಂದೆ ಇಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರು ಗುರುವಾರ ವಿಧಾನಪರಿಷತ್ನ ಕಲಾಪದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಸದಸ್ಯರ ಪ್ರಶ್ನೆಗಳ ಮಳೆಗೆ ಉತ್ತರಿಸಿದ ಸಿಎಂ ‘ಈ ಬಗ್ಗೆ ಜನರ ಅಭಿಪ್ರಾಯಗಳನ್ನು ಕೇಳಿದ್ದೇವು. ಈಗ ಆ ಪ್ರಸ್ತಾವನೆಯನ್ನು ಕೈಬಿಟ್ಟಿದ್ದೇವೆ.ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ’ ಎಂದು ತಿಳಿಸಿದರು.
‘ಸುತ್ತೋಲೆಯನ್ನು ವಾಪಾಸ್ ಪಡೆದಿದ್ದು, ಅದು ಪ್ರಕಟಣೆಯೇ ಹೊರತು ಸೂಚನೆಯೂ ಅಲ್ಲ,ಆದೇಶವೂ ಅಲ್ಲ. ಪ್ರಕಟಣೆಯನ್ನೂ ವಾಪಾಸ್ ತೆಗೆದುಕೊಳ್ಳುತ್ತೇವೆ’ ಎಂದರು.
‘ಬೇರೆಯವರ ಮಠ ದೇಗುಲಗಳನ್ನು ಪಡೆದು ಏನು ಮಾಡೋದು. ನಾವು ಮುಜರಾಯಿ ಇಲಾಖೆ ದೇವಾಲಯಗಳನ್ನು ನೋಡಿಕೊಳ್ಳುತ್ತೇವೆ’ ಎಂದರು.
ಪರಿಷತ್ನಲ್ಲಿ ತೀವ್ರ ಗದ್ದಲ; ಸಿಎಂ ಮೇಲೆ ಮುಗಿ ಬಿದ್ದ ಬಿಜೆಪಿ ಸದಸ್ಯರು…
ಪರಿಷತ್ನಲ್ಲಿ ಬಿಜೆಪಿ ಸದಸ್ಯರು ಸಿಎಂ ವಿರುದ್ಧ ಮುಗಿ ಬಿದ್ದು ಆಕ್ರೋಶ ಹೊರ ಹಾಕಿದರು. ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರು ನಿವೇನು ಹಿಂದೆ ನಿದ್ದೆ ಮಾಡುತ್ತಿದ್ರಾ.. ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ಬಿಜೆಪಿ ಸದಸ್ಯರಿಗೆ ತಿರುಗೇಟು ನೀಡಿದ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ‘ಪ್ರಕಟಣೆಯಿಂದ ಮಠಾಧೀಶರಿಗೆ ಆಘಾತವಾಗಿಲ್ಲ ಬಿಜೆಪಿಯವರಿಗೆ ರಾಜಕೀಯ ಆಘಾತವಾಗಿದೆ’ ಎಂದು ಕಿಡಿ ಕಾರಿದರು.
ಸರಕಾರ ಧಾರ್ಮಿಕ ದತ್ತಿ ಕಾಯ್ದೆಯ ವ್ಯಾಪ್ತಿಗೆ ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು, ಮಠಗಳ ನಿಯಂತ್ರಣಕ್ಕೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳು ಮತ್ತು ಜೈನ, ಬೌದ್ಧ, ಸಿಕ್ಖ್ ಜನಾಂಗಗಳಿಗೆ ಒಳಪಟ್ಟ ಧಾರ್ಮಿಕ
ಸಂಸ್ಥೆಗಳನ್ನು ಒಳಪಡಿಸಬೇಕೇ? ಬೇಡವೇ? ಒಳಪಡಿಸುವುದಾದರೆ ಯಾವ ರೀತಿ, ಎಷ್ಟರ ಮಟ್ಟಿಗೆ ಎಂದು ಸಾರ್ವಜನಿಕ ಪ್ರಕಟನೆ ಹೊರಡಿಸಿತ್ತು. ಈ ಬಗ್ಗೆ ಸ್ವಾಮೀಜಿಗಳು , ಧಾರ್ಮಿಕ ಮುಖಂಡರು ಮತ್ತು ಬಿಜೆಪಿ ತೀವ್ರ ಆಕ್ರೋಶ ಹೊರ ಹಾಕಿತ್ತು.