ಸುಮಲತಾಗೆ ಟಿಕೆಟ್ ಇಲ್ಲ:ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ
Team Udayavani, Mar 6, 2019, 12:30 AM IST
ವಿಜಯಪುರ/ಬಾದಾಮಿ/ಹುಬ್ಬಳ್ಳಿ: ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಅಂಬರೀಷ್ಗೆ ಕಾಂಗ್ರೆಸ್ ಟಿಕೆಟ್ ಕೊಡುವುದು ಕಷ್ಟ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳುವುದರೊಂದಿಗೆ ಮಂಡ್ಯ ರಾಜಕೀಯಇನ್ನೊಂದು ಮಜಲು ಮುಟ್ಟಿದಂತಾಗಿದೆ. ಸುಮಲತಾ ಪಕ್ಷೇತರರಾಗಿ ಸ್ಪರ್ಧೆ ಗಿಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಈ ನಡುವೆ, ಅವರನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಗಾಳ ಹಾಕಲಾರಂಭಿಸಿದೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಸಮನ್ವಯ ಸಮಿತಿ ಸಭೆಯಲ್ಲಿ ಹಾಲಿ ಸಂಸದರು ಇರುವ ಕ್ಷೇತ್ರದಲ್ಲಿ ಕಾಂಗ್ರೆಸ್ -ಜೆಡಿಎಸ್ ಪರಸ್ಪರ ಸೀಟು ಹಂಚಿಕೆ ಮಾಡುವಂತಿಲ್ಲ ಎಂದು ನಿರ್ಧರಿಸಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಸಂಸದರಿದ್ದಾರೆ. ಹೀಗಾಗಿ ಮೈತ್ರಿ ಪಕ್ಷಗಳ ಸ್ಪರ್ಧೆಯಲ್ಲಿ ಕಾಂಗ್ರೆಸ್ಗೆ ಆ ಕ್ಷೇತ್ರ ಸಿಗಲ್ಲ. ಅಂದ ಮೇಲೆ ಸುಮಲತಾ ಅವರಿಗೆ ಪಕ್ಷದಿಂದ ಟಿಕೆಟ್ ಕೊಡಲು ಆಗುವುದಿಲ್ಲ. ಸುಮಲತಾ ಪಕ್ಷೇತರರಾಗಿ ನಿಲ್ಲುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ. ಪಕ್ಷೇತರರಾಗಿ ನಿಲ್ಲುತ್ತಾರೆಂದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿಗೆ ಬನ್ನಿ: ಮತ್ತೂಂದು ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ ಪಕ್ಷದ ಟಿಕೆಟ್ನಿಂದ ಸುಮಲತಾ ಸ್ಪರ್ಧಿಸಲಿ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಹ್ವಾನಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು, ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಅಂಬರೀಷ್ ಪತ್ನಿ ಸುಮಲತಾ ಅವರಿಗೆ ಕಾಂಗ್ರೆಸ್-ಜೆಡಿಎಸ್ ವಂಚನೆ ಮಾಡಿವೆ. ಸುಮಲತಾ ಅವರು ಬಿಜೆಪಿ ಸೇರಿದರೆ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಪ್ರಯತ್ನ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಅಂಬರೀಶ್ ಹೆಸರು ಉಳಿಯಬೇಕಾದರೆ ಮೈತ್ರಿ ಪಕ್ಷಗಳಿಗೆ ಪಾಠ ಕಲಿಸಲು ಕ್ಷೇತ್ರದ ಜನರು ಮುಂದಾಗಬೇಕು. ಅದಕ್ಕಾಗಿ ಸುಮಲತಾ ಬಿಜೆಪಿ ಸೇರಿದರೆ ಅವರನ್ನು ಮಂಡ್ಯ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನಿಸುತ್ತೇನೆ. ಈ ಬಗ್ಗೆ ಪಕ್ಷದ ವರಿಷ್ಠರ ಜತೆಗೆ ಮಾತುಕತೆ ನಡೆಸು ವುದಾಗಿಯೂ ಯತ್ನಾಳ ಹೇಳಿದ್ದಾರೆ.