ಹಲವೆಡೆ ಒಪಿಡಿ ಸೇವೆ ಲಭ್ಯ;ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ
Team Udayavani, Jan 2, 2018, 9:21 AM IST
ಬೆಂಗಳೂರು: ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ವಜಾ ಮಾಡಿ, ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಜಾರಿಗೆ ತರುವ ಕೇಂದ್ರ ಸರಕಾರದ ಪ್ರಸ್ತಾವ ವಿರೋಧಿಸಿ ಕರೆ ನೀಡಿದ ಒಪಿಡಿ ಬಂದ್ಗೆ ಮಂಗಳವಾರ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ಮಣಿಪಾಲ್, ಅಪೋಲೋ, ನಾರಾಯಣ ನೇತ್ರಾಲಯ ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ಎಂದಿನಂತೆ ಒಪಿಡಿ ಸೇವೆ ಲಭ್ಯವಿದೆ. ಮೈಸೂರಿನಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ನೀಡುತ್ತಿದೆ. ಬೆಳಗಾವಿಯಲ್ಲೂ ಹೆಚ್ಚಿನ ಆಸ್ಪತ್ರೆಗಳು ಎಂದಿನಂತೆ ಒಪಿಡಿ ಸೇವೆ ನೀಡುತ್ತಿವೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹೊರ ರೋಗಿಗಳ ವಿಭಾಗ (ಒಪಿಡಿ)ದ ಸೇವೆಗಳನ್ನು ಬಂದ್ ಮಾಡಲು ಕರೆ ನೀಡಲಾಗಿತ್ತು.
ಶಿವಮೊಗ್ಗದಲ್ಲಿ ಬಂದ್ಗೆ ಬೆಂಬಲ ವ್ಯಕ್ತವಾಗಿದ್ದು ಎಲ್ಲಾ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ನೀಡುತ್ತಿಲ್ಲ.
ಬಾಗಲಕೋಟೆ, ರಾಮನಗರ,ತುಮಕೂರು, ಕೊಪ್ಪಳ,ಗದಗ, ಧಾರವಾಡ, ಜಿಲ್ಲೆಗಳಲ್ಲಿ,ಚಿಕ್ಕೋಡಿ ಉಪವಿಭಾಗದ ಪ್ರಮುಖ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಿವೆ.
ಬೆಳಗಾವಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ಲಭ್ಯವಿದೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯರು ಮೌನ ಪ್ರತಿಭಟನೆ ನಡೆಸಲಿದ್ದು ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ.