“ಪಕ್ಷ ಕೈಬಿಟ್ಟರೂ ಒಕ್ಕಲಿಗ ಸಮಾಜ ಜೊತೆಗಿದೆ’
Team Udayavani, Sep 12, 2019, 3:05 AM IST
ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷ ಕೈ ಬಿಟ್ಟರೂ ಒಕ್ಕಲಿಗ ಸಮುದಾಯ ಕೈ ಬಿಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಪರ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮುದಾಯ ಇದ್ದರೆ ಮಾತ್ರ ಪಕ್ಷ, ರಾಜಕೀಯ ಎಲ್ಲವೂ ಇರುತ್ತದೆ.
ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಶಿವಕುಮಾರ್ ಅವರಿಗೆ ನೈತಿಕ ಬಲ ನೀಡಲು ಸಮುದಾಯ ಮುಂದೆ ಬಂದಿದೆ. ಕೆಫೆ ಕಾಫಿ ಡೆ ಮಾಲೀಕ ಸಿದ್ದಾರ್ಥ ಅವರನ್ನು ಕಳೆದುಕೊಂಡಿದ್ದೇವೆ. ಈಗ ಇಡೀ ಒಕ್ಕಲಿಗ ಸಮುದಾಯವೇ ಡಿಕೆಶಿ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದರು.
ರಾಜ್ಯಪಾಲರಿಗೆ ಮನವಿ: ಒಕ್ಕಲಿಗ ನಾಯಕರ ವಿರುದ್ಧ ದಾಖಲಿಸಲಾಗಿರುವ ಸುಳ್ಳು ಪ್ರಕರಣಗಳನ್ನು ಕೈ ಬಿಡಬೇಕು ಎಂದು ಪ್ರತಿಭಟನಾ ರ್ಯಾಲಿಯ ನಂತರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮನವಿ ಸಲ್ಲಿಸಲಾಯಿತು.