ಬಾಕಿ ಶೇ. 20 ಮಂದಿಗೆ ಲಸಿಕೆ ಹಾಕಿಸುವುದೇ ಸಾಹಸ
ಮನೆ ಮನೆಗೆ ತೆರಳಿ ನೀಡಲು ಕ್ರಮ; ಮಾಹಿತಿ ಕೊರತೆ, ಅಪನಂಬಿಕೆ ಕಾರಣ
Team Udayavani, Oct 5, 2021, 7:00 AM IST
ಬೆಂಗಳೂರು: ರಾಜ್ಯದಲ್ಲಿ ಶೇ. 80ರಷ್ಟು ಮಂದಿಗೆ ಕೋವಿಡ್ ಮೊದಲ ಡೋಸ್ ಹಾಕ ಲಾಗಿದ್ದು, ಪ್ರತೀ ಐವರಲ್ಲಿ ನಾಲ್ವರು ಲಸಿಕೆ ಪಡೆ ದಂತಾಗಿದೆ. ಶೇ. 20 ಮಂದಿಗೆ ಲಸಿಕೆ ಹಾಕಲು ಬಾಕಿ ಇದ್ದು, ಇವರಿಗೆ ಪೋಲಿಯೋ ಮಾದರಿಯಲ್ಲಿ ಮನೆ ಮನೆ ಲಸಿಕೆ ಅಭಯಾನ ಆರಂಭಿ ಸಲು ಆರೋಗ್ಯ ಇಲಾಖೆ ಮುಂದಾಗಿದೆ.
ಸಂಖ್ಯಾವಾರು ಹೇಳುವುದಾದರೆ ಇವರ ಸಂಖ್ಯೆ 95 ಲಕ್ಷ. ಹಳ್ಳಿಭಾಗದಲ್ಲಿ ಕೋವಿಡ್ ಮತ್ತು ಲಸಿಕೆಯ ಬಗ್ಗೆ ಹಲವು ತಪ್ಪು ಕಲ್ಪನೆಗಳು ಇವೆ. ಹೀಗಾಗಿ ಬಾಕಿ ಶೇ. 20 ಮಂದಿಗೆ ಲಸಿಕೆ ಹಾಕಿಸಲು ಆರೋಗ್ಯ ಇಲಾಖೆ ಹರಸಾಹಸ ಪಡುವಂತಾಗಿದೆ.
ಗ್ರಾಮೀಣ ಭಾಗದಲ್ಲಿ ಕೋವಿಡ್ ಮತ್ತು ಲಸಿಕೆಯ ಕುರಿತು ಅಪನಂಬಿಕೆ, ತಪ್ಪು ತಿಳಿವಳಿಕೆ ಇದೆ. ಅಗತ್ಯ ದಾಖಲೆಗಳಿಲ್ಲ, ಮೊಬೈಲ್ ಇಲ್ಲ, ಶಿಬಿರಕ್ಕೆ ಕರೆತಂದು ಲಸಿಕೆ ಕೊಡಿಸುವವರಿಲ್ಲ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಇಂಥ ಸಮಸ್ಯೆಗಳು ಸಮೂಹ ಮಾಧ್ಯಮಗಳ ಜಾಗೃತಿಯಿಂದ ಪರಿಹಾರವಾಗು ವುದಿಲ್ಲ. ನೇರ ಸಂವಹನ ಅಗತ್ಯ ವಾಗಿದ್ದು, ಯೋಜನೆ ರೂಪಿ ಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮನೆ ಮನೆ ಲಸಿಕೆ ಕಾರ್ಯ ಕ್ರಮ ಆರಂಭಗೊಂಡಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಯೋಜನೆ ಪ್ರಕಾರ ನಗರಗಳಲ್ಲಿ ವಾರ್ಡ್ ಮಟ್ಟದಲ್ಲಿ, ಗ್ರಾ.ಪಂ. ವಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ, ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಲಸಿಕೆ ಪಡೆಯದವರ ಮಾಹಿತಿ ಸಂಗ್ರಹಿಸಲಿದ್ದಾರೆ.
ಇದನ್ನೂ ಓದಿ:ಮೋದಿ ಸರ್ಕಾರದ ಅಸ್ತಿತ್ವಕ್ಕೆ ಆಸ್ತಿ ಮಾರಾಟ; ಚರ್ಚೆಗೆ ಬಾರದ ಮೋದಿ; ಖರ್ಗೆ
ರಾಜ್ಯಕ್ಕೆ ಉಡುಪಿ ದ್ವಿತೀಯ
ಉಡುಪಿ: ರಾಜ್ಯದಲ್ಲಿ ಅತೀ ಹೆಚ್ಚು ಲಸಿಕೆ ವಿತರಿಸಿದ ಜಿಲ್ಲೆಗಳಲ್ಲಿ ಉಡುಪಿ ಒಂದಾಗಿದೆ. ಈ ಹಿಂದೆ 10 ಲಕ್ಷ ಜನರಿಗೆ ಲಸಿಕೆ ನೀಡಬೇಕೆಂದು ರಾಜ್ಯ ಸರಕಾರ ಗುರಿ ನಿಗದಿಪಡಿಸಿತ್ತು. ಇದು ಅಂದಾಜಿನ ಲೆಕ್ಕಾಚಾರವೇ ವಿನಾ ನಿಖರವಲ್ಲ. ಈಗ ಈ ಗುರಿಯನ್ನು 9 ಲಕ್ಷಕ್ಕೆ ಪರಿಷ್ಕರಿಸಲಾಗಿದೆ. ಈ ಲೆಕ್ಕಾಚಾರದಲ್ಲಿ ಉಡುಪಿ ಶೇ. 100 ಮೊದಲ ಡೋಸ್ ನೀಡಿದ ಜಿಲ್ಲೆಯಾಗಿದೆ.
ಜಿಲ್ಲೆಯಲ್ಲಿ ಸದ್ಯದ ಗುರಿಯ ಪ್ರಕಾರ 9,01,568 ಮಂದಿಗೆ ಪ್ರಥಮ ಡೋಸ್ ನೀಡಬೇಕಾಗಿದ್ದು, ಈಗಾಗಲೇ 9,07,085 ಮಂದಿಗೆ ಲಸಿಕೆ ನೀಡಿ ಶೇ. 101 ಸಾಧನೆ ಮಾಡಿದೆ. ದ.ಕ. ಜಿಲ್ಲೆ ಐದನೆಯ ಸ್ಥಾನದಲ್ಲಿದ್ದು, 16,20,908 ಗುರಿಯಲ್ಲಿ 15,00,948 ಮಂದಿಗೆ ಲಸಿಕೆ ನೀಡಿ ಶೇ. 93ರ ಸಾಧನೆ ಮಾಡಿದೆ.
ಅ. 4ರ ಗುರಿಯಂತೆ ಉಡುಪಿ ಜಿಲ್ಲೆಯಲ್ಲಿ 7,23,952 ಮಂದಿ ಎರಡನೆಯ ಡೋಸ್ ಪಡೆದುಕೊಳ್ಳಬೇಕಾಗಿದ್ದು, ಇದರಲ್ಲಿ 5,64,667 ಮಂದಿ ಎರಡನೆಯ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಇದರಲ್ಲಿಯೂ ಉಡುಪಿ ಜಿಲ್ಲೆ ಶೇ. 48 ಸಾಧನೆ ಮಾಡಿ ಎರಡನೆಯ ಸ್ಥಾನದಲ್ಲಿದೆ. ದ.ಕ. ಜಿಲ್ಲೆಯ 7,69,253 ಗುರಿಯಲ್ಲಿ 6,82,603 ಜನರಿಗೆ ಲಸಿಕೆ ವಿತರಿಸಿ ಶೇ. 42ರೊಂದಿಗೆ ಐದನೆಯ ಸ್ಥಾನದಲ್ಲಿದೆ.
ಉಡುಪಿ ಜಿಲ್ಲೆ ಹಿಂದಿನ ಗುರಿ ಪ್ರಕಾರ ಸುಮಾರು ಶೇ.91ರ ಸಾಧನೆಯಲ್ಲಿದೆ. ಈಗ 9 ಲಕ್ಷ ಮಂದಿ ಮೊದಲ ಡೋಸ್ ಪಡೆದುಕೊಂಡಿದ್ದರೆ, 5 ಲಕ್ಷ ಜನರಿಗೆ ಎರಡನೆಯ ಡೋಸ್ ನೀಡಿದೆ.
ಜನಸಂಖ್ಯೆ ನಿರಂತರ ಹೆಚ್ಚಳ
18 ವರ್ಷಕ್ಕಿಂತ ಹೆಚ್ಚಿಗೆಯಾದವರ ಸಂಖ್ಯೆ ಪ್ರತೀ ತಿಂಗಳು ಹೆಚ್ಚಳವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ತಿಂಗಳಿಗೆ 1,100ರಿಂದ 1,400 ಜನಸಂಖ್ಯೆ 18 ವರ್ಷಕ್ಕೆ ಮೇಲ್ಪಟ್ಟವರ ವ್ಯಾಪ್ತಿಗೆ ಸೇರುತ್ತಾರೆ.
ಲಸಿಕೆ ಬಾಕಿಯಲ್ಲಿ ಶಿರೂರು, ವಿತರಣೆಯಲ್ಲಿ ಮಣಿಪಾಲ ಮೊದಲು
ಈಗಲೂ ಲಸಿಕೆಗಳನ್ನು ನೀಡಲಾಗುತ್ತಿದೆ. ಲಸಿಕೆ ಪಡೆಯದೆ ಇದ್ದ ದೊಡ್ಡ ಪ್ರಮಾಣದ ಜನರು ಇರುವ ಊರುಗಳಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಮೊದಲ ಸ್ಥಾನದಲ್ಲಿದೆ. ಲಸಿಕೆ ವಿತರಣೆಯಲ್ಲಿ ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಮಾಧವಕೃಪಾ ಶಾಲೆ ಮೊದಲ ಸ್ಥಾನದಲ್ಲಿದೆ. ಈಗ ಕೊನೆಯ ಹಂತದಲ್ಲಿ ಇರುವುದರಿಂದ ಲಸಿಕೆಯನ್ನು ಪಡೆಯದೆ ಇದ್ದವರು ಆದಷ್ಟು ಶೀಘ್ರ ಲಸಿಕೆಯನ್ನು ಪಡೆಯುವುದು ಸೂಕ್ತ.
“ಉದಯವಾಣಿ’ ಪ್ರಯತ್ನಕ್ಕೆ ಶ್ಲಾಘನೆ
ಕೋವಿಡ್ ನಿರ್ಮೂಲನೆಗೊಳಿ ಸಲು “ಉದಯವಾಣಿ’ ನಡೆಸಿದ ಜನಜಾಗೃತಿ ಕಾರ್ಯಕ್ರಮ ಕೋವಿಡ್ ಲಸಿಕೆ ವಿತರಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಸೋಂಕು, ಲಸಿಕೆ ಅಭಿಯಾನಕ್ಕೆ ಸಂಬಂಧಿಸಿ ನಾಲ್ಕೈದು ಬಾರಿ ಫೋನ್ ಇನ್ ಏರ್ಪಡಿಸಿದಾಗ ಜನರಿಂದ ಬಂದ ಪ್ರತಿಕ್ರಿಯೆಯೇ ಇದಕ್ಕೆ ಸಾಕ್ಷಿ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಜಿಲ್ಲಾಡಳಿತದ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹದಿಂದ ಅತೀ ಹೆಚ್ಚು ಲಸಿಕೆಗಳನ್ನು ಸಾರ್ವಜನಿಕರಿಗೆ ಕೊಡಲು ಸಾಧ್ಯವಾಗಿದೆ. ಜನರೂ ಸ್ವಯಂಪ್ರೇರಿತರಾಗಿ ಮುಂದೆ ಬಂದು ಲಸಿಕೆ ಪಡೆದು ಸಹಕಾರ ನೀಡಿದ್ದಾರೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು ಕೆಳಸ್ತರದ ಸಿಬಂದಿಯ ವರೆಗೆ ಎಲ್ಲರೂ ಶಕ್ತಿಮೀರಿ ಪ್ರಯತ್ನ ಪಟ್ಟಿರುವುದರಿಂದ ಈ ಸಾಧನೆ ಸಾಧ್ಯವಾಗಿದೆ.
– ಡಾ| ನಾಗಭೂಷಣ ಉಡುಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಪ್ರಶಾಂತ ಭಟ್, ಜಿಲ್ಲಾ ನೋಡಲ್ ಅಧಿಕಾರಿ
ಡಾ| ಎಂ.ಜಿ. ರಾಮ, ಜಿಲ್ಲಾ ಲಸಿಕಾಧಿಕಾರಿ, ಉಡುಪಿ ಜಿಲ್ಲೆ