Karnataka ಜನರಲ್ಲಿ ನಮ್ಮ ಸರಕಾರ ಎನ್ನುವ ಭಾವನೆ ಮೂಡಿದೆ: ಲಕ್ಷ್ಮೀ ಹೆಬ್ಬಾಳಕರ್
ಘೋಷಿಸಿದ 5 ಗ್ಯಾರಂಟಿಗಳನ್ನೂ ಜಾರಿಗೊಳಿಸಲಾಗಿದೆ....
Team Udayavani, Jan 14, 2024, 8:28 PM IST
ಬೆಳಗಾವಿ: ರಾಜ್ಯದ ಜನರಲ್ಲಿ ನಮ್ಮ ಸರಕಾರ ಎನ್ನುವ ಭಾವನೆ ಮೂಡಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನೆ ಗ್ರಾಮಸ್ಥರು ಏರ್ಪಡಿಸಿದ್ದ ಸಮ್ಮಾನ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಸಚಿವೆ, ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಮನೆಯನ್ನೂ ತಲುಪಿವೆ. ಚುನಾವಣೆ ಪೂರ್ವ ಘೋಷಿಸಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನೂ ಜಾರಿಗೊಳಿಸಲಾಗಿದೆ. ಇವುಗಳಲ್ಲಿ ಒಂದಿಲ್ಲೊಂದು ಯೋಜನೆಗಳು ಎಲ್ಲರ ಮನೆಗಳನ್ನೂ ತಲುಪಿವೆ. ವಿದ್ಯುತ್ ಬಿಲ್ ತುಂಬುವುದು ತಪ್ಪಿದೆ, ಮಹಿಳೆಯರು ಬಸ್ ಟಿಕೆಟ್ ಪಡೆಯುವುದು ನಿಂತಿದೆ. ಗೃಹ ಲಕ್ಷ್ಮೀ ಮೂಲಕ 2 ಸಾವಿರ ರೂ. ಬರುತ್ತಿದೆ. ಪಡಿತರ ಮತ್ತು ಅದರ ಹಣ ಖಾತೆಗೆ ಜಮಾ ಆಗುತ್ತಿದೆ. ಈಗ ಯುವ ನಿಧಿ ಯೋಜನೆ ಜಾರಿಗೊಂಡಿದೆ ಎಂದರು.
ಈ ಎಲ್ಲ ಯೋಜನೆಗಳಿಂದ ಪ್ರಸ್ತುತ ಬರಗಾಲವನ್ನು ಎದುರಿಸುವ ಶಕ್ತಿ ಜನರಿಗೆ ಬಂದಿದೆ ಎಂದು ಸಚಿವೆ ಹೇಳಿದರು.