ಮಹದಾಯಿ ಪ್ರಸ್ತಾಪಿಸುತ್ತಾರಾ ಮೋದಿ?
Team Udayavani, Feb 3, 2018, 10:06 AM IST
ಬೆಂಗಳೂರು: ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಯಾತ್ರೆ ಹೊರತುಪಡಿಸಿ ಬೇರೆ ಯಾವುದೇ ವಿಚಾರದ ಬಗ್ಗೆ ಮಾತನಾಡುವ ಸಾಧ್ಯತೆ ಕಡಿಮೆ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮಹದಾಯಿ ವಿವಾದದ ಬಗ್ಗೆ ಪ್ರಧಾನಿ ಪ್ರಸ್ತಾಪಿಸುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನನಗೆ ಗೊತ್ತಿದ್ದಂತೆ ಪ್ರಧಾನಿಯವರು ವಿಧಾನಸಭೆ ಚುನಾವಣೆ ಕಾರ್ಯತಂತ್ರ ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ರಾಜ್ಯದ ಪರಿಸ್ಥಿತಿ ಕುರಿತು ಪ್ರಸ್ತಾಪಿಸಲಿದ್ದಾರೆ. ಉಳಿದ ಯಾವುದೇ ವಿಚಾರದ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇಲ್ಲ ಎಂದು ತಿಳಿಸಿದರು.
ರಾಜ್ಯದ ಕೆಲವೊಂದು ಸಮಸ್ಯೆಗಳ ಕುರಿತು ಪ್ರಧಾನಿಯ ವರು ಪ್ರಸ್ತಾಪಿಸುವರೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರಧಾನಿಯವರು ಪರಿವರ್ತನಾ ರ್ಯಾಲಿ ಹೊರತುಪಡಿಸಿ ಬೇರೆ ಯಾವುದೇ ವಿಚಾರದ ಬಗ್ಗೆ ಮಾತನಾಡುವ ಸಾಧ್ಯತೆಗಳಿಲ್ಲ. ಮಹದಾಯಿ ವಿಚಾರದಲ್ಲಿ ಗೋವಾದ ಕಾಂಗ್ರೆಸ್ ಯೋಜನೆಗೆ ಅಡ್ಡಿಪಡಿಸುತ್ತಿದ್ದು, ಅವರನ್ನು ಮನವೊಲಿಸುವ ಕೆಲಸವನ್ನು ಸಿದ್ದರಾಮಯ್ಯ ಸೇರಿದಂತೆ
ಕಾಂಗ್ರೆಸ್ ನಾಯಕರು ಮತ್ತು ವರಿಷ್ಠರು ಮಾಡುತ್ತಿಲ್ಲ. ಯೋಜನೆ ಅನುಷ್ಠಾನವಾಗುವುದು ಅವರಿಗೆ ಬೇಕಿಲ್ಲ ಎಂದು ಕಿಡಿಕಾರಿದರು. ಪ್ರಧಾನಿ ಕಾರ್ಯಕ್ರಮದ ವೇಳೆ ಅನ್ಯ ಪಕ್ಷಗಳಿಂದ ಮುಖಂಡರು ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ, ಆ ಕಾರ್ಯಕ್ರಮದಲ್ಲಿ ಯಾರನ್ನೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಮತ್ತು ಪ್ರಧಾನಿಯವರು ಅದನ್ನು ಇಷ್ಟಪಡುವುದೂ ಇಲ್ಲ. ಮುಂದಿನ ದಿನಗಳಲ್ಲಿ ಹಲವರು
ಪಕ್ಷ$ಸೇರಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಅಡ್ಡಿ ಅಸಾಧ್ಯ: ಪ್ರಧಾನಿಯವರು ಆಗಮಿಸುವ ಸಂದರ್ಭದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿರುವುದು ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿ ಬರುತ್ತಿರುವಾಗ ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಕನ್ನಡಪರ ಸಂಘಟನೆಗಳನ್ನು ಮುಂದಿಟ್ಟುಕೊಂಡು ಷಡ್ಯಂತ್ರ ರೂಪಿಸಿದೆ. ಯಾರು ಏನೇ ಮಾಡಿದರೂ ಪ್ರಧಾನಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದು ಅಸಾಧ್ಯ ಎಂದು ಹೇಳಿದರು.
ತಮ್ಮ ಪರಿವರ್ತನಾ ಯಾತ್ರೆ ಕುರಿತು ಪ್ರಸ್ತಾಪಿಸಿದ ಯಡಿಯೂರಪ್ಪ, ರಾಜ್ಯಾದ್ಯಂತ 85 ದಿನಗಳ ಕಾಲ 11 ಸಾವಿರ ಕಿ.ಮೀ. ಯಾತ್ರೆ ಸಂಚರಿಸಿದ್ದೇವೆ. 1 ಕೋಟಿ 75 ಲಕ್ಷ$ಜನರನ್ನು ತಲುಪಿದ್ದೇವೆ. ಯಾತ್ರೆ ಬಹುತೇಕ ಯಶಸ್ವಿಯಾಗಿದೆ ಎಂದರು. ಸಂಸದೆ ಶೋಭಾ ಕರಂದ್ಲಾಜೆ. ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಶಾಸಕ ಗೋವಿಂದ ಕಾರಜೋಳ, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ
ನಾಯ್ಡು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯ ದರ್ಶಿ ಎನ್. ರವಿಕುಮಾರ್ ಮತ್ತಿತರರು ಇದ್ದರು.
ಸಮಾರೋಪ ಯಶಸ್ವಿಯಾಗುತ್ತೆ: ಶೆಟ್ಟರ್
ಹುಬ್ಬಳ್ಳಿ: ರಾಜ್ಯ ಸರಕಾರದ ಪ್ರಾಯೋಜಕತ್ವದಿಂದ ಫೆ.4ರಂದು ಬೆಂಗಳೂರು ಬಂದ್ಗೆ ಕರೆ ನೀಡಲಾಗಿದ್ದರೂ ಅಂದು ಬೆಂಗಳೂರಿನಲ್ಲಿ ನಡೆಯುವ ಪರಿವರ್ತನಾ ರ್ಯಾಲಿ ಸಮಾರೋಪವನ್ನು ಯಶಸ್ವಿಗೊಳಿಸಲಾಗುವುದು ಎಂದು ವಿಧಾನಸಭೆ ಪ್ರತಿಪಕ್ಷ
ನಾಯಕ ಜಗದೀಶ ಶೆಟ್ಟರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜ.25ರಂದು ಮೈಸೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಆಗಮಿಸುತ್ತಿದ್ದರಿಂದ ಕರ್ನಾಟಕ ಬಂದ್ ಮಾಡಲಾಗಿತ್ತು. ಹೋರಾಟಗಾರರು ಜ.27ರಂದು ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದರು, ಆದರೆ ಜ.25ರಂದು ಬಂದ್ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಈಗ ನರೇಂದ್ರ ಮೋದಿ ಫೆ.4ರಂದು ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್ ಮಾಡುತ್ತಿರುವುದು ಖಂಡನೀಯ ಎಂದರು.