ತಜ್ಞರಿಂದ ಇಂದು ವರದಿ ಸಲ್ಲಿಕೆ, ಅದರ ಆಧಾರದಲ್ಲಿ ಮುಂದಿನ ಕ್ರಮ: ಸಚಿವ ಸುಧಾಕರ್
ಜನರು ಯಾವುದೇ ಸಭೆ ಸಮಾರಂಭಗಳನ್ನು ಎರಡು ತಿಂಗಳು ಮುಂದಕ್ಕೆ ಹಾಕಿ
Team Udayavani, Apr 15, 2021, 11:52 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಜ್ಞರು ಇಂದು ವರದಿ ಸಲ್ಲಿಸಲಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ್ಯಾವ ರಾಜ್ಯದಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆಂದು ನೋಡುತ್ತಿದ್ದೇವೆ. ಯಾವ ರೀತಿ ಕ್ರಮ ವಹಿಸಬೇಕು ಎನ್ನುವ ಕಲ್ಪನೆಯಿದೆ. ಡಿಸಿಎಂ ಅಶ್ವಥ್ ನಾರಾಯಣ್ ಅವರ ವಲಯದಲ್ಲಿ ನಿಯಂತ್ರಣಕ್ಕೆ ಕ್ರಮ ವಹಿಸಿದ್ದಾರೆ. ಜನರು ಕೂಡ ಕ್ರಮ ವಹಿಸಬೇಕು ಎಂದರು.
ಸಿಎಂ, ಗೃಹ ಸಚಿವರು ಸೇರಿದಂತೆ ಎಲ್ಲರೂ ಅವರ ವಲಯಗಳಲ್ಲಿ ಗಮನಿಸುತ್ತಿದ್ದಾರೆ. ಏನೇ ಆದರೂ ಜನರ ಸಹಕಾರ ಅಗತ್ಯ. ಕೆಲವು ಕಾರ್ಯಕ್ರಮಗಳನ್ನು ಮುಂದೆ ಹಾಕಿ ಕೊಳ್ಳುವುದರಿಂದ ಏನೂ ಜೀವ ಹೋಗಲ್ಲ. ಜನರು ಯಾವುದೇ ಸಭೆ ಸಮಾರಂಭಗಳನ್ನು ಎರಡು ತಿಂಗಳು ಮುಂದಕ್ಕೆ ಹಾಕಿ. ಇದಕ್ಕೆ ಜನ ಸಹಕಾರ ನೀಡಬೇಕು ಎಂದರು.
ಇದೇ ತಿಂಗಳ 18ರಂದು ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ಬನ್ನಿ ಅಂತ ಮಾತ್ರ ನಾನು ಕರೆಯಲು ಸಾಧ್ಯ ಎಂದು ಸುಧಾಕರ್ ಹೇಳಿದರು.