ಬಾಗಿನ ಅರ್ಪಿಸಿದ ಸಂಸದ ಪ್ರಜ್ವಲ್
Team Udayavani, Aug 12, 2019, 3:00 AM IST
ಹಾಸನ: ಹೇಮಾವತಿ ಜಲಾಶಯದ ಒಡಲು ಭರ್ತಿಯಾದ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರು ಭಾನುವಾರ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿ, ಕಳೆದೊಂದು ವಾರದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಮಳೆಯಾಗಿದ್ದು, ಹೇಮಾವತಿ ಜಲಾಶಯಕ್ಕೆ 1,30,000 ಕ್ಯೂಸೆಕ್ ನೀರಿನ ಒಳಹರಿವು ಇದ್ದುದರಿಂದ ಅನಿವಾರ್ಯವಾಗಿ ಒಂದು ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಬೇಕಾಯಿತು. ಪರಿಣಾಮ ಪ್ರವಾಹದಿಂದ ಹೊಳೆನರಸಿಪುರ ತಾಲೂಕಿನಲ್ಲಿ 25 ಸಾವಿರ ಎಕರೆ ಬೆಳೆ ಜಲಾವೃತವಾಯಿತು.
18 ಚಾನಲ್ಗಳು ಒಡೆದು ಹೋಗಿವೆ. ಅತಿವೃಷ್ಟಿಯಿಂದ ಬೇಲೂರು ತಾಲೂಕಿನಲ್ಲಿ 50 ಸಾವಿರ ಎಕರೆಯಷ್ಟು ಬೆಳೆ ಹಾಳಾಗಿದೆ. ಹೊಳೆನರಸೀಪುರ ತಾಲೂಕು ಹಳೆಕೋಟೆ ಹೋಬಳಿಯಲ್ಲಿ 98 ಮನೆಗಳು, ಚನ್ನರಾಯ ಪಟ್ಟಣದಲ್ಲಿ 28 ಮನೆಗಳು, ಹೊಳೆನರಸಿಪುರದಲ್ಲಿ 5 ಮತ್ತು ಗನ್ನಿಕಡದಲ್ಲಿ ಹಲವು ಮನೆಗಳು ಕುಸಿದಿವೆ. ಚನ್ನರಾಯ ಪಟ್ಟಣದ 78 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಹೊಳೆನರಸಿಪುರದಲ್ಲಿ 1, ಸಕಲೇಶಪುರದಲ್ಲಿ 6, ಬೇಲೂರಿನಲ್ಲಿ 4 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.