ಪರಿಷತ್ ಘಟನೆ: ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ
Team Udayavani, Dec 18, 2020, 10:06 AM IST
ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಕಳೆದ ಮಂಗಳವಾರ ನಡೆದ ಘಟನಾವಳಿಗಳಿಗೆ ಸಂಬಂಧಿಸಿದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿದ್ದಾರೆ.
ಸದನ ಆರಂಭವಾಗಿ ನಾನು ಸದನ ಮುಂದೂಡುವವರೆಗೂ ನನ್ನ ಅನುಪಸ್ಥಿತಿಯಲ್ಲಿ ಹಾಗೂ ನಿರ್ಗಮನದ ಬಳಿಕ ನಡೆದ ಘಟನೆಗಳ ಬಗ್ಗೆ ವರದಿಯನ್ನು ಕೂಡಲೇ ಸಲ್ಲಿಸುವಂತೆ ಸಭಾಪತಿಯವರು ಆದೇಶ ನೀಡಿದ್ದಾರೆ.
ಕೋರಂ ಬೆಲ್ ಚಾಲನೆಯಿದ್ದಾಗಲೇ ನಿಯಮ ಬಾಹಿರವಾಗಿ ಉಪ ಸಭಾಪತಿಯವರು ಸಭಾಪತಿ ಪೀಠದಲ್ಲಿ ಕುಳಿತುಕೊಂಡಿದ್ದು, ಪಭಾಪತಿ ಸದನ ಪ್ರವೇಶಿಸುವ ದ್ವಾರವನ್ನು ಮುಚ್ಚಿ ನನ್ನ ಪ್ರವೇಶಕ್ಕೆ ನಿರ್ಬಂಧಿಸಿರುವುದು, ನಿಯಮ ಬಾಹಿರವಾಗಿ ಪೀಠದಲ್ಲಿದ್ದ ಉಪ ಸಭಾಪತಿಯವರಿಗೆ ಸರಿಯಾಗಿ ಮಾಹಿತಿ ನೀಡದೆ ಸದನ ಮುಂದುವರಿಸಲು ತಾವು ದಾಖಲೆಗಳನ್ನು ಒದಗಿಸಿ ತಮ್ಮ ಕರ್ತವ್ಯ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿರುವುದನ್ನು ಗಮನಿಸಿದ್ದೇನೆ. ನಿಮ್ಮ ವರ್ತನೆ ವಿಧಾನ ಮಂಡಲದ ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿದೆ ಎಂದು ಪತ್ರದಲ್ಲಿ ಸಭಾಪತಿಯವರು ಉಲ್ಲೇಖಿಸಿದ್ದಾರೆ.
ನಿಯಮ ಮೀರಿದ, ಬೇಜವಾಬ್ದಾರಿಯ ಮತ್ತು ಅಧಿಕಾರ ವ್ಯಾಪ್ತಿ ಮೀರಿದ ನಿಮ್ಮ ಕಾರ್ಯನಿರ್ಬಹಣೆಯ ವಿರುದ್ಧ ಕ್ರಮ ವಹಿಸಬಾರದೇಕೆ ಎನ್ನುವ ಬಗ್ಗೆ ಅಗತ್ಯ ದಾಖಲೆಗಳೊಂದಿಗೆ ವಿವರಣೆ ನೀಡಬೇಕು ಎಂದು ಕಾರ್ಯದರ್ಶಿಯವರಿಗೆ ನೋಟಿಸ್ ನೀಡಲಾಗಿದೆ.