ವಿಧಾನಸೌಧ ವಜ್ರ ಮಹೋತ್ಸವಕ್ಕೆ ಸಕಲ ಸಿದ್ಧತೆ
Team Udayavani, Oct 11, 2017, 10:05 AM IST
ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಅಂಗವಾಗಿ 2 ದಿನಗಳ ವಿಶೇಷ ಜಂಟಿ ಅಧಿವೇಶ ನದ ಕಾರ್ಯಕಲಾಪ ಸಿದ್ಧಗೊಳಿಸಲಾಗಿದೆ. ಅ.25 ಹಾಗೂ 26 ರಂದು ಎರಡು ದಿನಗಳ ವಿಧಾನಸೌಧ ಬ್ಯಾಂಕ್ವೆಟ್ ಸಭಾಂಗಣ ಹಾಗೂ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ರಾಜ್ಯದ ಕಲೆ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾಜ್ಯದ
ಅಭಿವೃದ್ಧಿಗೆ ಕೊಡುಗೆ ಸಲ್ಲಿಸಿದವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮ ಹೇಗಿರುತ್ತೆ: ಅ.25 ರಂದು ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ವಿಧಾನಸಭೆ ಸಭಾಂಗಣದಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. 12.30 ಕ್ಕೆ ರಾಷ್ಟ್ರಪತಿಯವರು ನಿರ್ಗಮಿಸಲಿದ್ದಾರೆ. ಮಧ್ಯಾಹ್ನ 12.45 ಕ್ಕೆ ಅಧಿವೇಶನ ಪುನರಾ ರಂಭಗೊಂಡು ದಿ. ಮಾಜಿ ಸಚಿವ ಕಮರುಲ್ ಇಸ್ಲಾಂ ಹಾಗೂ ಇತರೆ ಗಣ್ಯ ವ್ಯಕ್ತಿಗಳ ನಿಧನಕ್ಕೆ ಸಂತಾಪ ಸೂಚನೆ ನಡೆಯಲಿದೆ. ನಂತರ ಭೋಜನಾ ವಿರಾಮದ ನಂತರ ಮಧ್ಯಾಹ್ನ 2.30ಕ್ಕೆ ಅಧಿವೇಶನ ಪ್ರಾರಂಭಗೊಂಡು ನಾಡಿನ ಇತಿಹಾಸ, ನಾಡು-ನುಡಿ, ಭಾಷೆ, ಜಲ- ನೆಲ, ಪ್ರಕೃತಿ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಸಂಜೆ 5 ಗಂಟೆಗೆ ಅಧಿವೇಶನ ಮುಕ್ತಾಯ ಗೊಳ್ಳಲಿದ್ದು, ನಂತರ 5 ರಿಂದ 6.30 ರವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಪರಂಪರೆ, ಕಲೆ, ಸಾಹಿತ್ಯ ಬಿಂಬಿಸುವ ಸಾಂಸ್ಕೃತಿ ಕಾರ್ಯಕ್ರಮಗಳು ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ನಡೆಯಲಿದೆ.
ಸಂಜೆ 6.30 ರಿಂದ 7 ಗಂಟೆವರೆಗೆ ದಿವಂಗತ ಕೆಂಗಲ್ ಹನುಮಂತಯ್ಯ , ಕೆ.ಸಿ.ರೆಡ್ಡಿ, ಕಡಿದಾಳ್ ಮಂಜಪ್ಪ ಅವರ ಕುಟುಂಬ ವರ್ಗದವರಿಗೆ ಗೌರವ ಅರ್ಪಣೆ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ದರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ನಂತರ ರಾತ್ರಿ7 ರಿಂದ 8.30 ರವರೆಗೆ ವಿಧಾನಸೌಧ ಮೇಲ್ಮೆ„ ಮೇಲೆ “3 ಡಿ ಮ್ಯಾಪಿಂಗ್’ ಪ್ರದರ್ಶನ ನಡೆಯಲಿದೆ. ಮರುದಿನ ಅ.26 ರಂದು 11 ಗಂಟೆಗೆ ವಿಧಾನ ಸೌಧ ಬಾಂಕ್ವೆಟ್ ಸಭಾಂಗಣದಲ್ಲಿ ಗಿರೀಶ್ ಕಾಸರ ವಳ್ಳಿಯವರ ನಿರ್ದೇಶನ ವಿಧಾನಸೌಧ ಕಟ್ಟಡ ನಿರ್ಮಾಣ ಸಾಕ್ಷ್ಯಾಚಿತ್ರ ಪ್ರದರ್ಶನ. 12 ಗಂಟೆಗೆ ಟಿ.ಎನ್.ಸೀತಾರಾಂ ನಿರ್ದೇಶನದ ಕರ್ನಾಟಕ
ವಿಧಾನಮಂಡಲ ಶಾಸನ ಸಭೆ ನಡೆದು ಬಂದ ಹಾದಿ’ ಸಾಕ್ಷ್ಯಚಿತ್ರ ಪ್ರದರ್ಶನ.
ಮಧ್ಯಾಹ್ನದ 1 ಗಂಟೆಗೆ ಮಾಸ್ಟರ್ ಕಿಶನ್ ನಿರ್ದೇಶನದ ವಿಧಾನಸೌಧ 3 ಡಿ ವರ್ಚೂಯಲ್ ರಿಯಾಲಿಟಿ ಚಿತ್ರದ ಪ್ರದರ್ಶನ. ಸಂಜೆ 5 ರಿಂದ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿ ಕಾರ್ಯಕ್ರಮ. ರಾತ್ರಿ 7 ರಿಂದ ರಿಕಿ ಕೇಜ್ ಗ್ರಾಮಿ ಪ್ರಶಸ್ತಿ ವಿಜೇತ ತಂಡದಿಂದ ರಾಜ್ಯದ ಜೀವರಾಶಿ, ಪ್ರಕೃತಿ, ವೈವಿಧ್ಯತೆ ಸೊಬಗಿನ ಸುಂದರ
ಚಿತ್ರಣದ “ಶಾಂತಿ ಸಂಸಾರ’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.