ಪಕ್ಷದಿಂದ ರಮೇಶ್ ಕುಮಾರ್ರನ್ನು ವಜಾಗೊಳಿಸಲಿ: ಡಾ.ಕೆ.ಸುಧಾಕರ್
Team Udayavani, Aug 4, 2019, 3:05 AM IST
ಚಿಕ್ಕಬಳ್ಳಾಪುರ: “ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸತತ ಏಳು ಬಾರಿ ಗೆಲುವು ಸಾಧಿಸಿದ ದಲಿತ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ನೀವು ನೇತೃತ್ವ ವಹಿಸಿ ಸೋಲಿಸಿದ್ದೀರಿ. ನಿಮಗೆ ಏನಾದರೂ ಮಾನ-ಮರ್ಯದೆ ಇದ್ದರೆ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿ. ಕಾಂಗ್ರೆಸ್ ಪಕ್ಷಕ್ಕೆ ಏನಾದರೂ ಮೌಲ್ಯ ಎನ್ನುವುದು ಉಳಿದಿದ್ದರೆ ಮೊದಲು ರಮೇಶ್ ಕುಮಾರ್ ಅವರನ್ನು ಪಕ್ಷದಿಂದ ವಜಾಗೊಳಿಸಲಿ’ ಇದು ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ನಡೆಸಿದ ವಾಗ್ಧಾಳಿ.
ಶಾಸಕ ಸ್ಥಾನದಿಂದ ಅರ್ನಹಗೊಂಡ ಬಳಿಕ ಮೊದಲ ಬಾರಿಗೆ ಶನಿವಾರ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಆಗಮಿಸಿದ್ದ ಡಾ.ಕೆ.ಸುಧಾಕರ್, ಸುದ್ದಿಗಾರರ ಜತೆ ಮಾತನಾಡಿ, “ಶಿವಶಂಕರ ರೆಡ್ಡಿ ಕೂಡ ವಿಧಾನಸಭಾ ಚುನಾವಣೆಯಲ್ಲಿ ಜನತಾದಳ ಪರ ಕೆಲಸ ಮಾಡಿದ್ದಾರೆ. ಆದರೆ, ನನ್ನ ವಿರುದ್ಧ ಯಾವುದೇ ವಿಚಾರಣೆ ನಡೆದಿಲ್ಲ. ನಾನು ಕಾಂಗ್ರೆಸ್ ವಿರುದ್ಧ ಏನು ಕೆಲಸ ಮಾಡಿದ್ದೇನೆಂದು ನನ್ನನ್ನು ಪಕ್ಷದಿಂದ ವಜಾ ಮಾಡಿದ್ದೀರಿ. ಯಾವುದಾದರೂ ಒಂದು ಸಣ್ಣ ಚುನಾವಣೆಯಲ್ಲಿ ಯಾವುದಾದರೂ ಲೋಪ ನನ್ನ ಕಡೆಯಿಂದ ಆಗಿದೆಯೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾನು ರಾಜಕಾರಣಕ್ಕೆ ಆಕಸ್ಮಿಕವಾಗಿ ಬಂದವನು. ನನಗೆ ಯಾವುದೇ ಆಸೆ, ಆಕಾಂಕ್ಷೆ ಇಲ್ಲ. ನೀವು ಅಂಬೇಡ್ಕರ್, ಬಸವಣ್ಣನವರ ನಂತರ ನಾನೇ ಅತಿ ಬುದ್ಧಿವಂತ ಎಂದು ವರ್ತಿಸುತ್ತಿದ್ದೀರಿ. ನಾನು ಮತ್ತೆ ಜನರ ಆರ್ಶೀವಾದದಿಂದ ಸದನಕ್ಕೆ ಬರುತ್ತೇನೆ. ಯಾವ ರೀತಿ ಸದನದಲ್ಲಿ ನೀವು ಹೇಳಿಕೆಗಳನ್ನು ಕೊಟ್ಟು ನಮ್ಮ ಮನಸ್ಸುಗಳನ್ನು ನೋಯಿಸುವ ಕೆಲಸ ಮಾಡಿದ್ದೀರಿ. ನಾನು ಕೂಡ ನಿಮ್ಮ ವ್ಯಕ್ತಿ ಚರಿತ್ರೆಯನ್ನು ಈ ರಾಜ್ಯದ ಜನತೆಯ ಮುಂದೆ ಬಿಚ್ಚಿಡುವ ಕೆಲಸ ಮಾಡುತ್ತೇನೆ’ ಎಂದು ರಮೇಶ್ ಕುಮಾರ್ಗೆ ಟಾಂಗ್ ನೀಡಿದರು.