ಎಲ್ಲರ ಚರಿತ್ರೆ ಬಿಚ್ಚಿಡಲು ಸಿದ್ಧ: ರೇವಣ್ಣ
Team Udayavani, Jul 20, 2019, 3:05 AM IST
ವಿಧಾನಸಭೆ: “ನಾನು ಈ ಹಿಂದೆ ಧರಂಸಿಂಗ್ ಸರ್ಕಾರದಲ್ಲಿ ನಂತರ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರದಲ್ಲೂ ಸಚಿವನಾಗಿದ್ದೆ. ಈ ಅವಧಿಯಲ್ಲಿ ಲೋಕೋಪಯೋಗಿ ಹಾಗೂ ಇಂಧನ ಖಾತೆ ನಿರ್ವಹಿಸಿದ್ದು, ಈ ಬಗ್ಗೆ ತನಿಖೆ ನಡೆಸಿದೆ ಎಂದು ಮುಖ್ಯಮಂತ್ರಿಗಳಿಗೆ ಬರೆದಿದ್ದೆ. ಬೇಕು ಎಂದರೆ ಚರಿತ್ರೆ ಬಿಚ್ಚಿಡಲು ಸಿದ್ಧನಿದ್ದೇನೆ’ ಎಂದು ಸಚಿವ ಎಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಭೋಜನಾ ನಂತರದ ಕಲಾಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ಇತ್ತೀಚೆಗೆ ನಾನು 500 ಕೋಟಿ ರೂ.ಪಡೆದ ಆರೋಪ ಮಾಡಿದರು. ಸರ್ಕಾರ ಐದು ರೂ.ಬಿಚ್ಚಿಲ್ಲ. ಇನ್ನು ಎಲ್ಒಸಿ ಎಲ್ಲಿಂದ ನೀಡಲಿ? ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಅಳಿಯನನ್ನು 16 ತಿಂಗಳಿನಿಂದ ಧಾರವಾಡದಲ್ಲೇ ನಿಯೋಜಿಸಲಾಗಿದೆ. ಕಾರ್ಯಪಾಲಕ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ ಅವರಿಗೆ ಬಡ್ತಿ ಕೂಡ ಸಿಕ್ಕಿದೆ.
ಅವರನ್ನೇ ಕೇಳಿಕೊಳ್ಳಿ ಎಷ್ಟು ಹಣ ಪಡೆದುಕೊಂಡಿದ್ದೇನೆ’ ಎಂದು ಹೇಳಿದರು. “ನನ್ನ ಇಲಾಖೆ ಸಂಬಂಧ ಸ್ಪೀಕರ್ ಬಳಿ ನಿಲುವಳಿ ಸೂಚನೆ ತರಲಿ. ಚರ್ಚೆಗೆ ಸಿದ್ಧನಿದ್ದೇನೆ. ನಾನು ಯಾರಿಗೂ ಮಂತ್ರಿಗಿರಿ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಹೇಳಿಲ್ಲ. ಜಿಲ್ಲೆಯಲ್ಲಿ 10 ವರ್ಷಗಳಿಂದ ಕೆಲಸ ಕಾರ್ಯಗಳಾಗಿರಲಿಲ್ಲ. ನನ್ನ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗೆ ಹೋಗಿಲ್ಲ’ ಎಂದು ತಿಳಿಸಿದರು.