ಲಾಕ್ಡೌನ್ ಇನ್ನಷ್ಟು ಸಡಿಲಿಕೆಗೆ ಮನವಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
Team Udayavani, Jun 17, 2020, 6:40 AM IST
ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಮಂಗಳವಾರ ಕೋವಿಡ್ 19 ಮುಕ್ತಿಗಾಗಿ ಶಂಕರ ಮಠದಲ್ಲಿ ಶ್ರೀಧನ್ವಂತರಿ ಮಹಾಯಜ್ಞವನ್ನು ನೆರವೇರಿಸಲಾಯಿತು.
ಬೆಂಗಳೂರು: ಕೋವಿಡ್ 19 ಸೋಂಕು ನಿಯಂತ್ರಿಸುವಲ್ಲಿ ಸರಕಾರ ಶಕ್ತಿ ಮೀರಿ ಶ್ರಮಿಸುತ್ತಿದ್ದು ಮತ್ತೆ ರಾಜ್ಯದಲ್ಲಿ ಲಾಕ್ಡೌನ್ ಆವಶ್ಯಕತೆ ಇಲ್ಲ.
ಪ್ರಧಾನಿ ಅವರೊಂದಿಗಿನ ಸಂವಾದದ ವೇಳೆ ಇನ್ನಷ್ಟು ಸಡಿಲಿಕೆಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸ್ವಾಮಿ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಮಂಗಳವಾರ ಕೋವಿಡ್ 19 ಮುಕ್ತಿಗಾಗಿ ಶಂಕರ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಧನ್ವಂತರಿ ಮಹಾಯಜ್ಞ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಲಿದ್ದು ಈ ವೇಳೆ ಜನರು ಸುಗಮ ಜೀವನ ನಡೆಸಲು ಮತ್ತು ಆರ್ಥಿಕ ಸುಧಾರಣೆಗೆ ಮತ್ತಷ್ಟು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡುವುದಾಗಿ ತಿಳಿಸಿದರು.
1,000 ಕೋ. ರೂ. ಬಿಡುಗಡೆ
ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಿಲ್ಲ. ಆದರೂ ಕೂಡ ರೈತರು ನೆಮ್ಮದಿಯಿಂದ ಬದುಕಬೇಕು ಎಂಬ ದೃಷ್ಟಿಯಿಂದ ಸರಕಾರ 1,000 ಕೋ. ರೂ. ಬಿಡುಗಡೆ ಮಾಡಿದೆ. ಇದರಲ್ಲಿ 50 ಲಕ್ಷ ರೈತರಿಗೆ ತಲಾ 2,000 ರೂ. ನೀಡಲಾಗುವುದು. ಕೇಂದ್ರ ಸರಕಾರ ಕೂಡ 6,000 ರೂ. ನೀಡಲಿದೆ ಎಂದರು.
ಸಚಿವರಾದ ಸಿ.ಟಿ. ರವಿ, ಡಾ| ಸುಧಾಕರ್, ಸಂಸದ ತೇಜಸ್ವಿಸೂರ್ಯ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿದ್ದರು.