ರಾಜ್ಯದಲ್ಲಿ ಹಿಂದುಳಿದ ಸಮುದಾಯ ಗುರುತಿಸಿ ಮೀಸಲಾತಿ ಕಲ್ಪಿಸಲಾಗುತ್ತಿದೆ: ಜಯಪ್ರಕಾಶ್ ಹೆಗಡೆ
Team Udayavani, May 27, 2022, 6:18 AM IST
ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಮೀಸಲಾತಿ ಕಲ್ಪಿಸಲಾಗುತ್ತಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಹೇಳಿದ್ದಾರೆ.
ತೆಲಂಗಾಣ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ತಂಡ ಗುರುವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ , ಡಿ. ದೇವರಾಜ ಅರಸು ಭವನದ ಕಛೇರಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನಾಥ ಮಕ್ಕಳಿಗೆ ಶಿಕ್ಷಣ, ಉದ್ಯೋಗ ದೊರಕಿಸಿಕೊಡುವ ಜವಾಬ್ದಾರಿ ಹೊತ್ತಿರುವ ತೆಲಂಗಾಣಕ್ಕೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ತಮಿಳು ಹಾಗೂ ರಾಜ್ಯಸ್ಥಾನ ರಾಜ್ಯಗಳಿಗೆ ಭೇಟಿ ನೀಡಲಾಗುವುದು, ಈ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಅನಾಥಶ್ರಮ ಮತ್ತು ಬಾಲಮಂದಿರಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು.
ವಿವಿಧ ಸಮುದಾಯಗಳು ಮೀಸಲಾತಿಗೆ ಬೇಡಿಕೆ ಇಟ್ಟಿರುವುದರಿಂದ ಆಯೋಗ ಜಿಲ್ಲೆಗಳಿಗೆ ಪ್ರವಾಸ ಮಾಡಿ, ಮನೆ ಮನೆಗೆ ತೆರಳಿ ಅಭಿಪ್ರಾಯ ಸಂಗ್ರಹ, ಸಮುದಾಯಗಳ ಮುಖಂಡರ ಜೊತೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ತೆಲಂಗಾಣ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ ವಕುಲಾಭರಣ ಕ್ರಷ್ಣಮೋಹನರಾವ್ ನೇತ್ರತ್ವದ ತೆಲಂಗಾಣ ತಂಡ ಎರಡು ದಿನಗಳ ಕಾಲ ರಾಜ್ಯ ಪ್ರವಾಸದಲ್ಲಿದ್ದು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗಡೆ , ಸದಸ್ಯರು, ಅಧಿಕಾರಿ ವರ್ಗದವರ ಜೊತೆ ವಿವಿಧ ಹಂತಗಳಲ್ಲಿ ಚರ್ಚೆ ನಡೆಸಲಿದೆ. ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಅಧ್ಯಯನದ ಜವಾಬ್ದಾರಿಯನ್ನು ಕೂಡ ತೆಲಂಗಾಣ ತಂಡ ಹೊಂದಿದ್ದು ಈ ಸಂಬಂಧ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಲಹೆ ಪಡೆಯಲಿದೆ. ತೆಲಂಗಾಣ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಸಿ.ಎಚ್. ಉಪೇಂದ್ರ, ಶುಭಪ್ರದ್ ಪಟೇಲ್ ನೂಲಿ, ಕೆ. ಕಿರ್ಶೋ ಗೌಡ್ ತಂಡದಲ್ಲಿದ್ದಾರೆ ರಾಜ್ಯ ಆಯೋಗದ ಸದಸ್ಯರಾದ ಕೆ ಟಿ ಸುವರ್ಣ, ಕಲ್ಯಾಣಕುಮಾರ್, ಶಾರದಾ ನಾಯ್ಕ, ಅರುಣಕುಮಾರ್ , ಬಿ ಎಸ್ ರಾಜಶೇಖರ್ ಹಾಜರಿದ್ದರು.