ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಶಶಿಕಲಾ ಜೊಲ್ಲೆ, ನಟಿ ತಾರಾ ಖುಲಾಸೆ
Team Udayavani, Dec 29, 2021, 10:30 PM IST
ಬೆಂಗಳೂರು: ಚಿಕ್ಕೋಡಿ ವಿಧಾನಸಭಾ ಕ್ಷೇತ್ರಕ್ಕೆ 2014ರಲ್ಲಿ ನಡೆದ ಉಪಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ಹಾಗೂ ಚುನಾವಣಾ ಅಕ್ರಮ ಎಸಗಿದ ಆರೋಪದಿಂದ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ನಟಿ ತಾರಾ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ (ಸಿಸಿಎಚ್-42)ದ ನ್ಯಾಯಾಧೀಶೇ ಜೆ. ಪ್ರೀತ್ ಅವರು, ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಇದೆ ಹಾಗೂ ಸಾಕ್ಷಿಗಳು ಪ್ರತಿಕೂಲ ಹೇಳಿಕೆಗಳನ್ನು ನೀಡಿದ್ದಾರೆ. ಆದ್ದರಿಂದ ಆರೋಪಿತರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗುತ್ತಿದೆ ಎಂದು ಆದೇಶಿಸಿದರು.
ಇದನ್ನೂ ಓದಿ:ಒಮಿಕ್ರಾನ್ ಹೆಚ್ಚಳ : ಪ್ರಧಾನಿ ಮೋದಿಯವರ ಯುಎಇ ಪ್ರವಾಸ ಮುಂದೂಡಿಕೆ
ಹಿನ್ನೆಲೆ
ಬೆಳಗಾವಿಯ ಚಿಕ್ಕೋಡಿ ವಿಧಾನಸಭಾ ಕ್ಷೇತ್ರಕ್ಕೆ 2014ರಲ್ಲಿ ನಡೆದಿದ್ದ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪರ ನಟಿ ತಾರಾ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಪ್ರಚಾರ ಮಾಡಿದ್ದರು. 2014ರ ಆ. 13 ರಂದು ರಾತ್ರಿ 10.30 ಗಂಟೆವರೆಗೆ ಸದಲಗಾ ಪಟ್ಟಣದ ಜೈನ್ ಕನ್ವೆನ್ಷನ್ ಹಾಲ್ ನಲ್ಲಿ ಸಭೆ ನಡೆಸಿದ್ದರು. ಈ ಬಗ್ಗೆ ಹನುಮೇಶಪ್ಪ ಎಂಬುವರು ಆ.14ರಂದು ಸದಲಗಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರಾತ್ರಿ ವೇಳೆ ಸಾರ್ವಜನಿಕರಿಗೆ ಕಿರಿಕಿರಿಯಾಗುವಂತೆ ಧ್ವನಿವರ್ದಕಗಳನ್ನು ಬಳಸಲಾಗಿದೆ. ಮತದಾರರಿಗೆ ಆಮಿಷ ಒಡ್ಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿತ್ತು. ದೂರಿನ ಮೇರೆಗೆ ಪೊಲೀಸರು ನಟಿ ತಾರಾ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ವಿರುದ್ಧ ಐಪಿಸಿ ಸೆಕ್ಷನ್ 171(ಇ) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 123 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳು ಪ್ರತಿಕೂಲ ಹೇಳಿಕೆ ನೀಡಿದ್ದರು.