ಮೋದಿ ಕಂಡರೆ ಯಡಿಯೂರಪ್ಪ ಗಡ ಗಡ ನಡಗುತ್ತಾರೆ : ಸಿದ್ದರಾಮಯ್ಯ
Team Udayavani, Feb 15, 2021, 8:54 PM IST
ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಭಯ ಕಾಡುತ್ತಿದ್ದು, ಗಡ ಗಡ ನಡುಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಮಳವಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಾದ ಜಿಎಸ್ಟಿಯ ಹಣ ಕೇಳುವ ಧೈರ್ಯ ಬಿಜೆಪಿಯವರಿಗೆ ಇಲ್ಲ. ಯಡಿಯೂರಪ್ಪಗೆ ಧಮ್ ಇಲ್ಲ. ಧಮ್ ಲೆಸ್, ಹೇಡಿ ಮುಖ್ಯಮಂತ್ರಿ. ನಿಮ್ಮ ಶಿಫಾರಸ್ಸು ನಾನು ಒಪ್ಪಲ್ಲ. ಹಣ ಕೊಡಲ್ಲ ಎಂದು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಡಿಯೂರಪ್ಪ ನಿರ್ಮಲಾ ಮನೆ ಮುಂದೆ ಹೋಗಿ ಕೇಳಿದ್ದಾರಾ..?. ಈ ತರಹದ ಸಿಎಂ ರಾಜ್ಯದಲ್ಲಿ ಇರಬೇಕಾ..? ಕಿತ್ತು ಎಸೆಯಬೇಕು ಎಂದು ಕಿಡಿಕಾರಿದರು.
ಅಚ್ಛೇದಿನ್ ಇದೇನಾ…?:
ಅಚ್ಛೇದಿನ್ ಆಯೇಗಾ, ಅಚ್ಛೇದಿನ್ ಆಯೇಗಾ, ಕಹಾ ಹೇ ಅಚ್ಛೇದಿನ್, ಕಬ್ ಆಯೇಗಾ ಮೋದಿ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಕಾಲದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇತ್ತು. ಕಚ್ಚಾ ತೈಲ ಬೆಲೆ ಹೆಚ್ಚಿದ್ದರೂ ಕಡಮೆ ದರದಲ್ಲಿ ಕೊಡಲಾಗುತ್ತಿತ್ತು. ಆದರೆ ಈಗ ಕಚ್ಚಾ ತೈಲದ ಬೆಲೆ ಕಡಿಮೆ ಇದ್ದರೂ ದರ ಹೆಚ್ಚಿಸಲಾಗಿದೆ. ಇದೇನಾ ಅಚ್ಛೇದಿನ್ ಎಂದು ಕಿಡಿಕಾರಿದರು.
56 ಇಂಚಿನ ಎದೆ ಅಂತಾರೆ ಮೋದಿ. ನಾನು ಮೊನ್ನೆ ಟೈಲರ್ ಬಳಿ ಚೆಕ್ ಮಾಡಿಸಿದೆ. ನಂದು 46 ಇಂಚಿನ ಎದೆ. ನರೇಂದ್ರ ಮೋದಿ ಅವರದ್ದು 56 ಇಂಚಿನ ಎದೆ. ಎಷ್ಟು ಇಂಚಿನ ಎದೆ ಅನ್ನುವುದು ಮುಖ್ಯ ಅಲ್ಲ. ಎದೆಯಲ್ಲಿ ಮಾನವೀಯತೆ ಮನುಷ್ಯತ್ವ ಮುಖ್ಯ. ಮೋದಿ ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ ಗಿರಾಕಿ. ನಾನು ಸ್ವಾತಂತ್ರ್ಯ ಬರುವ ಸ್ವಲ್ಪ ದಿನ ಮುಂಚೆ ಹುಟ್ಟಿದವನು. ಯಾರಾದರೂ ಬಿಜೆಪಿ ಅವರು ದೇಶಕ್ಕೋಸ್ಕರ ಪ್ರಾಣಕೊಟ್ಟಿದ್ದಾರಾ..? ಎಂದು ಪ್ರಶ್ನಿಸಿದರು.
ಹೊಂದಾಣಿಕೆ ಇಲ್ಲ:
ಜೆಡಿಎಸ್ ಅಧಿಕಾರಕ್ಕೆ ಬರ್ತೀವಿ ಅಂತಾರೆ, ಹೇಗೆ ಬರ್ತಾರೆ..?. ನಾನು ಚಲುವರಾಯಸ್ವಾಮಿ ಜೆಡಿಎಸ್ನಲ್ಲಿದ್ದಾಗ ೫೭ ಸೀಟ್ ಗೆದ್ದಿದ್ವಿ. ಆ ಮೇಲೆ 28, ಕಳೆದ ಬಾರಿ 37, ಮುಂದೆ 15 ಬರಬಹುದು. ಜೆಡಿಎಸ್ ಜತೆಗಿನ ಮೈತ್ರಿಗೆ ನಾನು ಒಪ್ಪಿರಲಿಲ್ಲ. ಹೈಕಮಾಂಡ್ ತೀರ್ಮಾನವಾಗಿತ್ತು. ಮುಂದೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದರು.
ಪಡಿತರ ಅಕ್ಕಿ ನಿಲ್ಲಿಸಿ ಬಿಡ್ತಾರೆ:
ನಾನು ಸಿಎಂ ಆಗಿದ್ದಾಗ ಜನರಿಗೆ 7 ಕೆಜಿ ಅಕ್ಕಿ ನೀಡುತ್ತಿದ್ದೆ. ಆದರೆ ಯಡಿಯೂರಪ್ಪ ಅವರು 5 ಕೆಜಿಗೆ ಇಳಿಸಿದ್ದಾರೆ. ಮುಂದಿನ ದಿನಗಳಲ್ಲಿ 3 ಕೆಜಿಗೆ ಇಳಿಸ್ತಾರೆ. ನಂತರ ಅಕ್ಕಿ ನೀಡುವುದನ್ನು ನಿಲ್ಲಿಸೇ ಬಿಡ್ತಾರೆ. ನಮ್ಮ ಸರ್ಕಾರ ಬಂದರೆ ಜನರಿಗೆ ತಲೆಗೆ 10 ಕೆಜಿ ನೀಡುತ್ತೇವೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಸೂಯೆಯಿಂದ ನನ್ನ ಸೋಲಿಸಿದರು:
ನನ್ನನ್ನು ಅಸೂಯೆಯಿಂದ ಸೋಲಿಸಿದರು. 2ನೇ ಬಾರಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ನನ್ನ ಸೋಲಿಸಿದರು. ನಾನು ಮಾಡಿದ ಕೆಲಸಗಳನ್ನು ಜನ ಮರೆತಿಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಮೇಲೆ ನನ್ನ ಎಲ್ಲ ಕಾರ್ಯಕ್ರಮ ನಿಲ್ಲಿಸುತ್ತಿದ್ದಾರೆ. ರೈತನ ಮಗ ಎನ್ನುವ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವಾಗ ಹಸಿರು ಶಾಲು ಹಾಕಿಕೊಳ್ಳೋದು, ಮತ್ತೆ , ರೈತರಿಗೆ ಅವಮಾನ ಮಾಡೋದು. ನಾವು ಮಾಡಿದ ಎಲ್ಲ ಕೆಲಸಗಳು ಹೊಳೆಯಲ್ಲಿ ಹುಣೆಸೆ ಹಣ್ಣು ತೇದ ಹಾಗೆ ಆಗಿದೆ ಎಂದರು.
ಇದನ್ನೂ ಓದಿ : ಬದಲಾದ ಸಮಯದಲ್ಲಿ ‘ಬಿಗ್ ಬಾಸ್’ …‘ಸೀಸನ್ 8’ಗೆ ಡೇಟ್ ಫಿಕ್ಸ್