ನಾನು ಹೇಳಿದ್ದೆ, ಅವರು ಕೊಡಲಿಲ್ಲ:ತುಮಕೂರು ಕ್ಷೇತ್ರದ ಬಗ್ಗೆ ಸಿದ್ದು !
Team Udayavani, Mar 17, 2019, 8:00 AM IST
ಮೈಸೂರು: ಲೋಕಸಭಾ ಚುಣಾವಣೆಗೆ ರಾಜ್ಯ ಮೈತ್ರಿ ಪಕ್ಷಗಳ ಸೀಟು ಹಂಚಿಕೆ ಇನ್ನೂ ಕಗ್ಗಂಟಾಗೆ ಉಳಿದಿದೆ. ಅದರಲ್ಲೂ ಹಾಲಿ ಕಾಂಗ್ರೆಸ್ ಸಂಸದರನ್ನು ಹೊಂದಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಟ್ಟಿರುವ ಬಗ್ಗೆ ಪಕ್ಷದಲ್ಲೇ ವಿರೋಧ ಹೊರಬಂದ ಹಿನ್ನಲೆಯಲ್ಲಿ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರು ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.
ರವಿವಾರ ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ನಲ್ಲೇ ಇಟ್ಟುಕೊಳ್ಳುವಂತೆ ನಾನು ಹೇಳಿದ್ದೆ. ಆದರೆ ಅವರು ಕೇಳಲಿಲ್ಲ ಎಂದರು. ತುಮಕೂರುಕ್ಷೇತ್ರದ ಹಾಲಿ ಸಂಸದ ಮುದ್ದಹನುಮ ಗೌಡರಿಗೆ ಟಿಕೆಟ್ ತಪ್ಪಿದ್ದಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಅಸಮಧಾನ ವ್ಯಕ್ತಪಡಿಸಿದ್ದರು
‘ಮಂಡ್ಯದಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಕೈ ಕೊಟ್ಟರೆ ನಾವು ಮೈಸೂರಿನಲ್ಲಿ ಕಾಂಗ್ರೆಸ್ ಗೆ ಕೈಕೊಡುತ್ತೇವೆ’ ಎಂದು ಸಾ.ರಾ.ಮಹೇಶ್ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸಾ.ರಾ.ಮಹೇಶ್ ಹೇಳಿಕೆ ಸರಿಯಲ್ಲ. ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ದೇವೇಗೌಡ ಅಥವಾ ಕುಮಾರಸ್ವಾಮಿ ಅವರು ಇಂತಹ ಹೇಳಿಕೆ ನೀಡಿಲ್ಲ ಅಲ್ವ. ಅವರನ್ನು ಬಿಟ್ಟು ಬೇರೆಯವರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.