ಹೈಕಮಾಂಡ್ ಮೆಚ್ಚಿಸಲು ಸಿದ್ದು ಹೇಳಿಕೆ: ಜೋಶಿ
Team Udayavani, Oct 20, 2019, 3:00 AM IST
ಹುಬ್ಬಳ್ಳಿ: ತಾತ ಹಾಗೂ ತಾಯಿಯಿಂದ ಬಳುವಳಿಯಾಗಿ ಬಂದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ್ದ ರಾಜೀವ ಗಾಂಧಿಗೆ ಮೊದಲು “ಭಾರತ ರತ್ನ’ ನೀಡಿ, ನಂತರ ದೇಶಕ್ಕೆ ಸಂವಿಧಾನ ನೀಡಿದ ಡಾ| ಬಿ.ಆರ್.ಅಂಬೇಡ್ಕರ್ ಅವರಿಗೆ “ಭಾರತ ರತ್ನ’ ನೀಡಿದ ಪಕ್ಷದ ನಾಯಕರಿಂದ ಪಾಠ ಕಲಿಯಬೇಕಾಗಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರಾಜೀವ ಗಾಂಧಿಗೆ ಭಾರತ ರತ್ನ ನೀಡಿದರು. ನಂತರ ಡಾ|ಅಂಬೇಡ್ಕರ್ಗೆ ನೀಡಲಾಯಿತು. ಇದೀಗ ವೀರ ಸೇನಾನಿ ಸಾರ್ವಕರ್ ಅವರಿಗೆ ಭಾರತ ರತ್ನ ನೀಡಬೇಕು ಎನ್ನುವಾಗ ಸಿದ್ದರಾಮಯ್ಯ, ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ಅವರನ್ನು ನಿರ್ಲಕ್ಷಿಸಿದ್ದಾಗ ಸಿದ್ದರಾಮಯ್ಯ ಏಕೆ ಧ್ವನಿ ಎತ್ತಲಿಲ್ಲ.
ಸಾರ್ವಕರ್ ಬಗ್ಗೆ ಇತಿಹಾಸ ಗೊತ್ತಿಲ್ಲದೆ ಮಾತನಾಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ಮೆಚ್ಚಿಸಲು ಹೇಳಿಕೆ ನೀಡುವುದನ್ನು ಸಿದ್ದರಾಮಯ್ಯ ಬಿಡಬೇಕು ಎಂದು ವಾಗ್ಧಾಳಿ ನಡೆಸಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ದಾವೂದ್ ಇಬ್ರಾಹಿಂನಂತಹ ವ್ಯಕ್ತಿಗಳಿಗೆ ಭಾರತ ರತ್ನ ನೀಡುತ್ತಿದ್ದರು. ಕಾಂಗ್ರೆಸ್ ಸರಕಾರ ಇದ್ದಾಗ ಒಳ್ಳೆ ಸಾಧಕರನ್ನು ಗುರುತಿಸಲಿಲ್ಲ ಎಂಬುದನ್ನು ಸಿದ್ದರಾಮಯ್ಯ ಅರಿಯಲಿ ಎಂದರು.