ವರಿಷ್ಠರ ಸೂಚನೆಯಿಂದ ಸೈಲಾಂಟಾಗಿದ್ದೇನೆ
Team Udayavani, Jun 25, 2019, 3:04 AM IST
ಮದ್ದೂರು: “ಪಕ್ಷದ ಬಗ್ಗೆ ಮಾತನಾಡದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಹಾಗಾಗಿ ತಾವು ಬಾಯಿ ಮುಚ್ಚಿಕೊಂಡು ಇದ್ದೇನೆ’ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು. ತಾಲೂಕಿನ ಸೋಮನಹಳ್ಳಿ ಗ್ರಾಮದ ಮಾಜಿ ಶಾಸಕ ದಿ. ಎಸ್.ಎಂ. ಶಂಕರ್ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಬಾರದೆಂಬ ಹಿನ್ನೆಲೆಯಲ್ಲಿ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿದ್ದೇನೆ. ನೀವೂ ಒಂದು ಪ್ಲಾಸ್ಟರ್ ಕೊಟ್ರೆ ಅದನ್ನೂ ಹಾಕಿಕೊಳ್ಳುತ್ತೇನೆಂದು ಮಾಧ್ಯಮದವರೊಂದಿಗೆ ತಮಾಷೆ ಮಾಡಿದರು. ಶಾಸಕ ಶ್ರೀರಾಮುಲು ಅವರು “ಡಿ.ಕೆ. ಶಿವಕುಮಾರ್ ಎಲ್ಲಿದ್ದೀಯಪ್ಪಾ’ ಎಂದು ಟ್ವೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಶ್ರೀರಾಮಲು ಅಣ್ಣನವರಿಗೆ ಮುಂದೆ ಉತ್ತರ ನೀಡುತ್ತೇನೆಂದು ಮಾರ್ಮಿಕವಾಗಿ ನುಡಿದರು.
ಬೆಳೆಗಳಿಗೆ ನೀರು ಹರಿಸುವಂತೆ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಗಮನ ಸೆಳೆದಾಗ ಕಾವೇರಿ ನೀರನ್ನು ಹರಿಸುವ ಅಧಿಕಾರ ನಮ್ಮ ಅಧಿಕಾರಿಗಳಿಗಿಲ್ಲ. ಈ ಸಂಬಂಧ ಮಂಗಳವಾರ ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದಿದ್ದು ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.