ಉಗ್ರನ ಜಾಡು ಪತ್ತೆಗೆ ರಾಜ್ಯದ ತಂಡಗಳು
Team Udayavani, Jun 10, 2022, 6:17 AM IST
ಬೆಂಗಳೂರು: ಇತ್ತೀಚೆಗೆ ಜಮ್ಮು-ಕಾಶ್ಮೀರ ಪೊಲೀಸರು ಹಾಗೂ ಸಿಆರ್ಪಿಎಫ್ ಪಡೆ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ತಾಲಿಬ್ ಹುಸೇನ್ ಅಲಿಯಾಸ್ ತಾರೀಖ್ ಸಂಪರ್ಕದಲ್ಲಿದ್ದ ವ್ಯಕ್ತಿಗಳು, ವಾಸವಾಗಿದ್ದ ಸ್ಥಳ ಹಾಗೂ ಇತರೆಡೆ ತೆರಳಿ ರಾಜ್ಯ ಆಂತರಿಕ ಭದ್ರತಾ ಪಡೆ (ಐಎಸ್ಡಿ) ಹಾಗೂ ಭಯೋತ್ಪಾದನ ನಿಗ್ರಹ ಪಡೆ(ಎಟಿಸಿ) ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಮಧ್ಯೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಉಗ್ರನಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ತಾಲಿಬ್ ಹುಸೇನ್ ಈ ಹಿಂದೆ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ. ಆಗ ಆತ ವಾಸವಾಗಿದ್ದ ಶೆಡ್, ಬಳಿಕ ಶ್ರೀರಾಮಪುರದಲ್ಲಿ ವಾಸವಾಗಿದ್ದ ಮನೆ, ಪ್ರಾರ್ಥನೆಗೆ ಹೋಗುತ್ತಿದ್ದ ಮಸೀದಿಗಳು ಹಾಗೂ ಓಡಾಡುತ್ತಿದ್ದ ಇತರ ಪ್ರದೇಶಗಳಿಗೆ ತೆರಳಿ, ಆತನ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈ ಮಧ್ಯೆ ಆತನ ಇಬ್ಬರು ಮಕ್ಕಳನ್ನು ಬನಶಂಕರಿಯಲ್ಲಿರುವ ಮಸೀದಿಯ ಮದ್ರಸ ಶಿಕ್ಷಣಕ್ಕೆ ಸೇರಿಸಿದ್ದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆತ ಬಳಸುತ್ತಿದ್ದ ಸಿಮ್ಕಾರ್ಡ್ ನಂಬರ್ ಪಡೆಯಲಾಗಿದ್ದು, ಮಾಹಿತಿಗಾಗಿ ದೂರವಾಣಿ ಸಂಪರ್ಕ ಇಲಾಖೆಯ ಸಹಾಯವನ್ನೂ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.