“2 ದಿನಗಳಲ್ಲಿ ಪೂರಕ ಪರೀಕ್ಷೆ ವೇಳಾಪಟ್ಟಿ’
Team Udayavani, Aug 11, 2020, 6:10 AM IST
ಬೆಂಗಳೂರು: ಎಸೆಸೆಲ್ಸಿಯ ಪೂರಕ ಪರೀಕ್ಷೆಯನ್ನು ಆಗಸ್ಟ್ನಲ್ಲೇ ನಡೆಸುವುದು ಕಷ್ಟ. ಮುಂದಿನ ಎರಡು ದಿನಗಳಲ್ಲಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ಕುಮಾರ್ ತಿಳಿಸಿದರು.
ಫಲಿತಾಂಶದ ಸ್ಕ್ಯಾನ್ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಆನ್ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕು. ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಆ.11ರಿಂದ 20ರ ವರೆಗೆ ಪಡೆಯಲು ಅವಕಾಶವಿದೆ. ಡೆಬಿಟ್ ಅಥವಾ ಕ್ರೆಡಿಡ್ ಕಾರ್ಡ್, ಆನ್ಲೈನ್ ಬ್ಯಾಂಕಿಂಗ್ನಲ್ಲಿ ಶುಲ್ಕ ಪಾವತಿಸಬಹುದು. ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯವಿರದವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಚಲನ್ ಡೌನ್ಲೋಡ್ ಮಾಡಿಕೊಂಡು ಶುಲ್ಕವನ್ನು ಬೆಂಗಳೂರು ಒನ್, ಕರ್ನಾಟಕ ಒನ್ ಹಾಗೂ ಬ್ಯಾಂಕ್ಗಳಲ್ಲಿ ಆ.21ರ ಒಳಗೆ ಪಾವತಿಸಬೇಕು. ಪ್ರತಿ ವಿಷಯದ ಸ್ಕ್ಯಾನ್ ಪ್ರತಿಗೆ 405 ರೂ. ನಿಗದಿ ಮಾಡಲಾಗಿದ್ದು, ಚಲನ್ ಮೂಲಕ ಪಾವತಿಸಿದರೆ ಹೆಚ್ಚುವರಿ 5 ರೂ.ಗಳನ್ನು ಪಾವತಿಸಬೇಕು. ಸ್ಕ್ಯಾನ್ ಪ್ರತಿಗಳನ್ನು ಇ-ಮೇಲ್ ಮೂಲಕ ರವಾನಿಸಲಾಗುತ್ತದೆ ಎಂದರು.
ಆ.14ರಿಂದ ಮರು ಮೌಲ್ಯಮಾಪನಕ್ಕೆ ಅವಕಾಶ
ಮರು ಮೌಲ್ಯಮಾಪನಕ್ಕೆ ಆ.14ರಿಂದ 24ರ ವರೆಗೆ ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಆ. 25 ಕೊನೆಯ ದಿನವಾಗಿದ್ದು, ಪ್ರತಿ ವಿಷಯಕ್ಕೆ 805 ರೂ. ನಿಗದಿ ಮಾಡಲಾಗಿದೆ. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆದ ಬಳಿಕ ಅಂಕಗಳ ವ್ಯತ್ಯಾಸವಾಗಿದ್ದಲ್ಲಿ ಮಂಡಳಿಗೆ ಪತ್ರ ಬರೆದು ಸರಿಪಡಿಸಿಕೊಳ್ಳಬಹುದು. ಅಂಕಗಳ ವ್ಯತ್ಯಾಸವಾಗಿದ್ದಲ್ಲಿ ಪರಿಶೀಲಿಸಿ ಮಂಡಳಿಯು ಪರಿಷ್ಕೃತ ಫಲಿತಾಂಶದ ಮಾಹಿತಿಯನ್ನು ಸಂಬಂಧಪಟ್ಟ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ರವಾನಿಸಲಿದೆ ಎಂದರು.
ಫಲಿತಾಂಶ ವಿಂಗಡನೆ
ಪರೀಕ್ಷೆಗೆ ಹಾಜರಾಗಿ ಫಲಿತಾಂಶ ಪ್ರಕಟವಾಗ ದಿದ್ದಲ್ಲಿ ಮಂಡಳಿಗೆ ಪತ್ರ ಬರೆದು ಹತ್ತು ದಿನ ಗಳೊಳಗೆ ಕಾರಣ ತಿಳಿದುಕೊಳ್ಳಬಹುದು. ಉತ್ತೀರ್ಣ ರಾಗಿರುವ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿಯಲ್ಲಿ “ಪಿ’ ಎಂದು ಹಾಗೂ ಉನುತ್ತೀರ್ಣ ರಾಗಿರುವವರಿಗೆ “ಎಫ್’ ಎಂದು ನಮೂದಿಸ ಲಾಗಿದೆ. ಮುಖ್ಯ ಪರೀಕ್ಷೆಯ ಎಲ್ಲ ವಿಷಯ ಅಥವಾ ಯಾವುದಾದರೂ ಒಂದು ವಿಷಯಕ್ಕೆ ಗೈರು ಹಾಜರಾಗಿದ್ದಲ್ಲಿ “ಇ’ ಎಂದು ನಮೂದಿಸಿ ಫಲಿತಾಂಶ ನೀಡಲಾಗಿದೆ.
“ಇ’ ಫಲಿತಾಂಶದ ವಿದ್ಯಾರ್ಥಿಗಳಿಗೆ ಸೆಪ್ಟಂಬರ್ ನಲ್ಲಿ ನಡೆಯಲಿರುವ ಪೂರಕ ಪರೀಕ್ಷೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅಲ್ಲದೆ, “ಪ್ರಥಮ ಅವಕಾಶ’ ಎಂದು ಪರಿಗಣಿಸಲಾಗುತ್ತದೆ. ಹಾಜರಾತಿ ಕೊತರೆ ಹೊರತುಪಡಿಸಿ, ಕೊರೊನಾ ಹಾಗೂ ಇತರ ಅನಾರೋಗ್ಯದ ಕಾರಣದಿಂದ ಹಾಜರಾಗದ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸುವ ಅಥವಾ ಶುಲ್ಕ ಪಾವತಿಸುವ ಆವಶ್ಯಕತೆ ಇಲ್ಲ. ಆದರೆ, ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಅರ್ಜಿ ಸಲ್ಲಿಸಬೇಕು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಳಾ ಮಾಹಿತಿ ನೀಡಿದರು.