ಶಂಕಿತ ನಕ್ಸಲ್ ಕೊರನಕೋಟೆ ಕೃಷ್ಣನಿಗೆ ಐದು ವರ್ಷ ಸಜೆ
Team Udayavani, Jul 21, 2019, 3:00 AM IST
ಶಿವಮೊಗ್ಗ: ಶಂಕಿತ ನಕ್ಸಲರು ಜಿಲ್ಲೆಯ ಆಗುಂಬೆ ಬಳಿ ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಕೊರನಕೋಟೆ ಕೃಷ್ಣನಿಗೆ 5 ವರ್ಷ ಸಜೆ ಮತ್ತು 20 ಸಾವಿರ ರೂ. ದಂಡ ವಿ ಧಿಸಿ ಶುಕ್ರವಾರ ತೀರ್ಪು ನೀಡಿದೆ.
ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಎಚ್.ಅನಿತಾ ಮತ್ತು ಸುರೇಶ್ ನಾಯ್ಕ ಖುಲಾಸೆಗೊಂಡಿದ್ದಾರೆ. ಗುರುವಾರ ಪ್ರಕರಣದ ವಿಚಾರಣೆ ಮುಗಿಸಿದ್ದ ನ್ಯಾಯಾ ಧೀಶೆ ಪ್ರಭಾವತಿ ಎಸ್.ಹಿರೇಮಠ ಅವರು ಕೊರನಕೋಟೆ ಕೃಷ್ಣನನ್ನು ಅಪರಾಧಿ ಎಂದು ಘೋಷಿಸಿ, ಅನಿತಾ ಮತ್ತು ಸುರೇಶ್ನನ್ನು ಖುಲಾಸೆಗೊಳಿಸಿದ್ದರಲ್ಲದೆ ತೀರ್ಪನ್ನು ಕಾಯ್ದಿರಿಸಿದ್ದರು.
2007ರಲ್ಲಿ ಆಗುಂಬೆ ಬಳಿ ಶಂಕಿತ ನಕ್ಸಲರು ರಾಜ್ಯ ಸಾರಿಗೆ ಸಂಸ್ಥೆಯ ಬೆಂಗಳೂರು ಬಸ್ಸನ್ನು ಸುಟ್ಟು ಹಾಕಿದ್ದರು. ನಕ್ಸಲ್ ನಾಯಕ ರಾಜಮೌಳಿಯನ್ನು ಕೇರಳ ಪೊಲೀಸರು ಎನ್ಕೌಂಟರ್ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಿದ್ದೇವೆ’ ಎಂದು ನಕ್ಸಲರು ಹೇಳಿಕೊಂಡಿದ್ದರು. ಇದಕ್ಕೆ ಸಂಬಂಧಿಸಿ ಆಗುಂಬೆ ಪೊಲೀಸರು 7 ಮಂದಿ ಶಂಕಿತ ನಕ್ಸಲರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳಿಲ್ಲದ ಕಾರಣ ತೀರ್ಥಹಳ್ಳಿ ಪ್ರಥಮ ದರ್ಜೆ ನ್ಯಾಯಾಲಯವು 2010ರಲ್ಲಿ ಸುರೇಶ ನಾಯ್ಕ ಮತ್ತು ಅನಿತಾ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ಇದಾದ 5 ವರ್ಷದ ಬಳಿಕ 2017ರಲ್ಲಿ ಕೊರನಕೋಟೆ ಕೃಷ್ಣ, ಅನಿತಾ ಮತ್ತು ಸುರೇಶ್ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂ ಧಿಸಿ ನ್ಯಾಯಾಲಯ 56 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು.