ಕೋವಿಡ್ ತಡೆಗೆ ಟಾಸ್ಕ್ ಫೋರ್ಸ್
Team Udayavani, Apr 30, 2021, 6:30 AM IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ನಾನಾ ಕ್ರಮಗಳಿಗೆ ಮುಂದಾಗಿರುವ ರಾಜ್ಯ ಸರಕಾರವು ಗ್ರಾ.ಪಂ. ಮತ್ತು ತಾಲೂಕು ಮಟ್ಟದಲ್ಲಿ ಟಾಸ್ಕ್ಫೋರ್ಸ್ ರಚನೆಗೆ ಮುಂದಾಗಿದೆ.
ಗ್ರಾಮಗಳ ಮಟ್ಟದಲ್ಲಿ ಗ್ರಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಗುರುವಾರ ವಿವಿಧ ಜಿಲ್ಲಾಧಿಕಾರಿಗಳ ಜತೆಗೆ ವೀಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಸಮಿತಿಯಲ್ಲಿ ಪಿಡಿಒ ಸದಸ್ಯ ಕಾರ್ಯದರ್ಶಿಯಾಗಿರಬೇಕು. ಪೊಲೀಸ್, ಶಿಕ್ಷಣ, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳು, ಸ್ವಯಂಸೇವಾ ಸಂಸ್ಥೆ ಗಳ ಪ್ರತಿನಿಧಿಗಳು ಇರಬೇಕು ಎಂದಿದ್ದಾರೆ.
ಈ ಮೂಲಕ ಸ್ಥಳೀಯ ಮಟ್ಟದಲ್ಲಿ ಸೋಂಕಿನ ಬಗ್ಗೆ ಜಾಗೃತಿ ಮತ್ತು ತಡೆಗೆ ಕ್ಷಿಪ್ರಗತಿಯಲ್ಲಿ ಕಾರ್ಯಕ್ರಮ ಜಾರಿ ಮಾಡಬೇಕು ಎಂದಿದ್ದಾರೆ.
ಇತರ ಜಿಲ್ಲೆಗಳ ರೋಗಿಗಳ ಬಗ್ಗೆ ಗಮನ :
ಮಹಾರಾಷ್ಟ್ರ ಸಹಿತ ಇತರೆಡೆಯಿಂದ ಗಡಿ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕುಪೀಡಿತರು ಆಗಮಿಸುತ್ತಿರುವುದು ಕಳವಳಕಾರಿ. ಗಡಿ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ನೆರೆಯ ರಾಜ್ಯಗಳ ಸೋಂಕುಪೀಡಿತರು ದಾಖಲಾಗುತ್ತಿದ್ದಾರೆ. ಈ ಬಗ್ಗೆ ಡಿ.ಸಿ.ಗಳು ನಿಗಾ ವಹಿಸಬೇಕು. ಕೆಲವು ಜಿಲ್ಲೆಗಳಲ್ಲಿ ಈವರೆಗೆ ಕೋವಿಡ್ ಕೇರ್ ಸೆಂಟರ್ ತೆರೆಯದಿರುವ ಬಗ್ಗೆ ಸಿಎಂ ಬೇಸರ ವ್ಯಕ್ತಪಡಿಸಿ, ತಾಲೂಕು ಕೇಂದ್ರಗಳಲ್ಲೂ ಕೇರ್ ಸೆಂಟರ್ ತೆರೆಯಬೇಕು ಎಂದಿದ್ದಾರೆ.
ನಿಗಾಕ್ಕೆ ಸೂಚನೆ :
ಹಳ್ಳಿಗಳ ಕಡೆಗೆ ತೆರಳು ತ್ತಿರುವ ಜನರ ಮೇಲೆ ಹೆಚ್ಚಿನ ನಿಗಾ ಇರಿಸ ಬೇಕು. ಜಿಲ್ಲೆಗಳಲ್ಲಿ ಕೋವಿಡ್ ಪ್ರಮಾಣ ತಗ್ಗಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಬೇಕು. ಮಾರ್ಗಸೂಚಿ ಉಲ್ಲಂ ಸಿ ದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸ ಬೇಕು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಸಹಿತ ಇತರ ವಿವರಗಳನ್ನು ಜಿಲ್ಲಾಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿದರು.
ಲಕ್ಷಣ ಇಲ್ಲದವರಿಗಿಲ್ಲ ಪರೀಕ್ಷೆ :
ಕೋವಿಡ್ ಪರೀಕ್ಷೆ ಬಗ್ಗೆ ಪ್ರಸ್ತಾವಿಸಿದ ಸಿಎಂ ಯಡಿಯೂರಪ್ಪ, ಲಕ್ಷಣ ಇಲ್ಲದವರಿಗೆ ಪರೀಕ್ಷೆ ಬೇಡ ಎಂದು ಸೂಚಿಸಿದ್ದಾರೆ. ಹಾಗೆಯೇ ಪರೀಕ್ಷಾ ಫಲಿತಾಂಶವನ್ನು 24 ತಾಸುಗಳಲ್ಲಿ ನೀಡುವ ವ್ಯವಸ್ಥೆ ಕಲ್ಪಿಸಬೇಕು. ಬಾಕಿಯಿರುವ ಪರೀಕ್ಷೆಗಳನ್ನು ಕೂಡಲೇ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಕೋವಿಡ್ ನಿಧಿಗೆ ಸಚಿವರ ವೇತನ :
ಎಲ್ಲ ಸಚಿವರು ತಮ್ಮ ಒಂದು ವರ್ಷದ ವೇತನ ಮತ್ತು ಶಾಸಕರು ಒಂದು ತಿಂಗಳ ವೇತನವನ್ನು ಕೋವಿಡ್ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಅದರಂತೆ ಸಚಿವರೆಲ್ಲ ಒಂದು ವರ್ಷದ ವೇತನವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.