ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ
Team Udayavani, Feb 3, 2017, 3:45 AM IST
ಬೆಂಗಳೂರು: ರಾಜ್ಯ ವಿಧಾನಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಶುಕ್ರವಾರ (ಫೆ.3) ಮತದಾನ ನಡೆಯಲಿದೆ. ಕಾಂಗ್ರೆಸ್ನ ಟಿ.ಎಸ್.ನಿರಂಜನ್, ಬಿಜೆಪಿಯ ಪಿ.ಆರ್. ಬಸವರಾಜು ಹಾಗೂ ಜೆಡಿಎಸ್ನ ರಮೇಶಬಾಬು ಹಾಗೂ ಹರಿಹರ ಶಾಸಕ ಎಚ್.ಎಸ್.ಶಿವಶಂಕರ್ ಸಹೋದರ ಎಚ್.ಎಸ್. ಅರವಿಂದ್ ಸೇರಿ ಒಟ್ಟು 14 ಮಂದಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳು ಹಾಗೂ ದಾವಣಗೆರೆ ಜಿಲ್ಲೆಯ
ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲೂಕುಗಳು ಬರುತ್ತವೆ. 15,139 ಪುರುಷರು ಹಾಗೂ 6,215 ಮಹಿಳೆಯರು ಸೇರಿ
ಒಟ್ಟು 21,354 ಮತದಾನದ ಹಕ್ಕು ಹೊಂದಿದ್ದಾರೆ. ಕೋಲಾರದಲ್ಲಿ 3,528, ಚಿಕ್ಕಬಳ್ಳಾಪುರದಲ್ಲಿ 2,818, ತುಮಕೂರು- 7,508,
ಚಿತ್ರದುರ್ಗ- 4,255, ದಾವಣಗೆರೆ ಜಿಲ್ಲೆಯಲ್ಲಿ 3,345 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಕ್ಷೇತ್ರದ ವ್ಯಾಪ್ತಿಗೆ ಸೇರಿದ 5 ಜಿಲ್ಲೆಗಳ 38 ಮತಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಮತ ಎಣಿಕೆ ಕಾರ್ಯ ಫೆ.6 ರಂದು ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ. ಉಪಚುನಾವಣೆಯಲ್ಲಿ ಗೆದ್ದವರ ಸದಸ್ಯತ್ವ ಅವಧಿ 2018ರ
ಜೂ.21ರವರೆಗೆ ಇರಲಿದೆ.