ತೇಜ್ರಾಜ್ ಶರ್ಮಾ ಮನೆ ಪರಿಶೀಲನೆ
Team Udayavani, Mar 8, 2018, 12:12 PM IST
ತುಮಕೂರು: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿಯವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ತೇಜ್ರಾಜ್ ಶರ್ಮ ತುಮಕೂರಿನ ಬಿದಿರು ಮಳೆ ತೋಟದಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದ್ದು ಆ ಮನೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ತಂಡ ಬುಧವಾರ ಸಂಜೆ ಪರಿಶೀಲನೆ ನಡೆಸಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ಗೋಪಿನಾಥ್ ಅವರ ತಂಡ ಮೊದಲು ಆರೋಪಿ ತೇಜ್ರಾಜ್ ಇದ್ದ ಎಸ್.ಎಸ್.ಪುರಂ ನಲ್ಲಿರುವ ಮನೆಯನ್ನು ಪರಿಶೀಲಿಸಿದಾಗ ನೆರೆಹೊರೆಯವಿರಿಗೆ ಆತನ ಕುರಿತು ಮಾಹಿತಿಯೇ ಇರಲಿಲ್ಲ. ಈತ ಮೂಲತಃ ರಾಜಸ್ಥಾನದವನಾಗಿದ್ದು ಕಳೆದ 20ವರ್ಷಗಳ ಹಿಂದೆ ತುಮಕೂರಿಗೆ ಬಂದು ನೆಲೆಸಿದ್ದ ಇಲ್ಲಿಯ ಸರ್ಕಾರಿ ಕಚೇರಿಗಳಿಗೆ ಪೀಠೊಪಕರಣಗಳನ್ನು ಸರಬರಾಜು ಮಾಡುವ ಗುತ್ತಿಗೆ ಕೆಲಸವನ್ನು ಮಾಡುತ್ತಿದ್ದ ಎನ್ನುವ ಮಾಹಿತಿ ಸದ್ಯಕ್ಕೆ ದೊರೆತಿದೆ.
ಕನ್ನಡದಲ್ಲೇ ಅರ್ಜಿ: ಈತ ಇಲ್ಲಿಯ ಬಾಲ ಮಂದಿರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಮಂಚವನ್ನು ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಕನ್ನಡದಲ್ಲಿಯೇ ಪತ್ರಬರೆದಿದ್ದ. ದೂರು ವಿಚಾರಣೆ ನಡೆಯುತ್ತಿದ್ದು, ಅಧಿಕಾರಿಗಳು ಬಾಲ ಮಂದಿರದ ಅಧಿಕಾರಿಯಾಗಿರುವ ವಾಸಂತಿ ಉಪ್ಪಾ ರ ಅವರಿಗೆ ನೋಟಿಸ್ ಕಳುಹಿಸಿ ಆರೋಪಿ ತೇಜ್ರಾಜ್ ವಿಚಾರಣೆ ನಡೆಸಿ ಅಧಿಕಾರಿಯನ್ನು ನೋಡಿದ್ದೀರಾ ಎಂದಾಗ ಇಲ್ಲ ಎಂದಿದ್ದ. ಪ್ರಕರಣ ಮೊದಲೇ ನಡೆದಿತ್ತು ಎಂದಿದ್ದ ಹೀಗಾಗಿ ಪ್ರಕರಣದಲ್ಲಿ ಹುರುಳಿಲ್ಲ ಎಂದು ವಜಾ ಆಗಿತ್ತು.
ಉತ್ತಮ ಬಾಂಧವ್ಯ: ಲೋಕಾಯುಕ್ತ ನ್ಯಾಯಮೂರ್ತಿ ಅವರಿಗೆ ಚಾಕುವಿನಿಂದ ಇರಿದ ವ್ಯಕ್ತಿ ತುಮಕೂರಿನವನು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ಆತ ವಾಸವಿದ್ದ ಎರಡು ಕಡೆಯ ಕೊಠಡಿಗಳನ್ನು ತಮ್ಮ ವಶಕ್ಕೆ ಪಡೆಯಲಾಗಿದೆ. ಈತನ ಸಹೋದರ ತುಮಕೂರು ವಾಸಿ ಎಂದು ತಿಳಿದು ಬಂದಿದೆ ಆತನನ್ನು ಪತ್ತೆ ಮಾಡುತ್ತೇವೆ. ಈತ ಯಾರೊಂದಿಗೂ ಉತ್ತಮ ಬಾಂಧವ್ಯ ಹೊಂದಿಲ್ಲ. ಈತ ಫರ್ನೇಚರ್ ಏಜೆನ್ಸಿ ಮಾಡಿಕೊಂಡಿದ್ದ ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾ ವಿ ಗೋಪಿನಾಥ್ ತಿಳಿಸಿದ್ದಾರೆ.