ಮೂಲ ಕಾಂಗ್ರೆಸಿಗರ ಸರ್ವನಾಶವೇ ಸಿದ್ದರಾಮೋತ್ಸವದ ಉದ್ದೇಶ: ಬಿಜೆಪಿ ವ್ಯಂಗ್ಯ
ಪಿಸು ಮಾತು ಬಂದಾಗಲೇ ಡಿ.ಕೆ.ಶಿವಕುಮಾರ್ ಎಚ್ಚೆತ್ತುಕೊಳ್ಳಬೇಕಿತ್ತು....
Team Udayavani, Jul 23, 2022, 1:59 PM IST
ಬೆಂಗಳೂರು: ಸಿದ್ದರಾಮಯ್ಯ ಬೆಂಬಲಿಗರ ಸಿದ್ದರಾಮೋತ್ಸವದ ಬಗ್ಗೆ ಬಿಜೆಪಿ ವ್ಯಂಗ್ಯ ಮಾಡಿದ್ದು, ಸರಣಿ ಟ್ವೀಟ್ ಮಾಡಿದೆ.
ಸಿದ್ದರಾಮೋತ್ಸವ ಎನ್ನುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಣದ ಪೊಲಿಟಿಕಲ್ ಟೂಲ್ ಕಿಟ್!. ಇದೊಂದು ವ್ಯವಸ್ಥಿತವಾದ ರಾಜಕೀಯ ಗುಪ್ತಮಾರ್ಗಸೂಚಿಯ ಭಾಗ, ಮೂಲ ಕಾಂಗ್ರೆಸಿಗರ ಸರ್ವನಾಶವೇ ಇದರ ಉದ್ದೇಶ ಎಂದು ಬರೆದಿದೆ.
ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸಿದ್ದರಾಮೋತ್ಸವ ಏಕಾಏಕಿ ಆಯೋಜನೆಗೊಂಡಿದ್ದಲ್ಲ. ಯಾವ ದಾಳವನ್ನು ಯಾವಾಗ ಯಾರ ಮುಂದೆ ಉರುಳಿಸಬೇಕೆಂಬ ಅನುಭವ ಸಿದ್ದರಾಮಯ್ಯಗಿದೆ. ಸಿದ್ದರಾಮೋತ್ಸವದ ಮೂಲಕ ಮುಂದೆ ಡಿಕೆಶಿ, ಪರಮೇಶ್ವರ್ ಹಾಗೂ ಖರ್ಗೆ ಅವರನ್ನು ಮಕಾಡೆ ಮಲಗಿಸುವ ಉದ್ದೇಶವಿದೆಯೇ? ಎಂದು ಪ್ರಶ್ನಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಪಿಸು ಮಾತು ಬಂದಾಗಲೇ ಡಿ.ಕೆ.ಶಿವಕುಮಾರ್ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಟೂಲ್ ಕಿಟ್ ಆಟ ಅದಾಗಲೇ ಶುರುವಾಗಿತ್ತು, ಅಮಾಯಕರ ತಲೆದಂಡವಾಯಿತಷ್ಟೇ. ಈಗ ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಟೂಲ್ಕಿಟ್ ಪ್ರಹಸನ ಆರಂಭಿಸಿದ್ದಾರೆ, ಈ ಬಾರಿ ದೊಡ್ಡ ಬೇಟೆಯಾಡುವುದು ಖಚಿತ! ಎಂದು ಬರೆದಿದೆ.