ವಾರದೊಳಗೆ ರಾಜ್ಯ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ
ಸರ್ಕಾರಕ್ಕೆ ನನ್ನ ಔಷಧ ಲೈಸೆನ್ಸ್ ನೀಡಿದ್ದೇನೆ, ಸರ್ಕಾರ ಅದನ್ನು ಗೌಪ್ಯವಾಗಿಟ್ಟು ಕೊಂಡಿದೆ ಎಂಬುದು ಸುಳ್ಳು: ಡಾ.ಗಿರಿಧರ್ ಕಜೆ
Team Udayavani, Aug 3, 2020, 10:32 AM IST
ಬೆಂಗಳೂರು: ಕ್ಲಿನಿಕಲ್ ಟ್ರಯಲ್ನಲ್ಲಿ ಸಾಬೀತಾಗಿರುವ ಸಾತ್ಮ ಮತ್ತು ಭೌಮ್ಯ ಆಯುರ್ವೇದ ಔಷಧವನ್ನು ರೋಗ ನಿರೋಧಕ ಶಕ್ತಿವರ್ಧನೆಯಾಗಿ ಕೋವಿಡ್ ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬಂದಿರುವ 70 ಸಾವಿರ ಜನರಿಗೆ ಉಚಿತವಾಗಿ ವಿತರಿಸಲು ಒಂದು ವಾರದೊಳಗೆ ಸರ್ಕಾರ ಅನುಮತಿ ನೀಡುವ ವಿಶ್ವಾಸವಿದೆ ಎಂದು ಆಯುರ್ವೇದ ವೈದ್ಯ ಡಾ.ಗಿರಿಧರ ಕಜೆ ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಆಯುರ್ವೇದ ಔಷಧದ ಪರವಾನಿಗೆ ಹಾಗೂ ಬಿಎಂಸಿಆರ್ಐ ನೀಡಿರುವ ನೋಟಿಸ್ ಗೊಂದಲದ ಹಿನ್ನೆಲೆಯಲ್ಲಿ ಭಾನುವಾರ ಫೇಸ್ಬುಕ್ ಲೈವ್ ಮೂಲಕ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿ, “ಸರ್ಕಾರಕ್ಕೆ ನಾನು ನನ್ನ ಔಷಧ ಲೈಸೆನ್ಸ್(ಪರವಾನಗಿ) ನೀಡಿದ್ದೇನೆ, ಸರ್ಕಾರ ಅದನ್ನು ಗೌಪ್ಯವಾಗಿಟ್ಟುಕೊಂಡಿದೆ ಎಂಬುದು ಸುಳ್ಳು,’ ಎಂದು ಸ್ಪಷ್ಟಪಡಿಸಿದರು.
ರೋಗನಿರೋಧಕ ಶಕ್ತಿ ಹೆಚ್ಚಳ ಸಂಬಂಧ ವಿವಿಧ ರೋಗಗಳಿಗೆ ಔಷಧವಾಗಿ ಸಿದ್ಧಪಡಿಸಿರುವ ಔಷಧ ಮಾರಾಟಕ್ಕೆ ಈಗಾಗಲೇ ನಿಯಮಾನುಸಾರ ಪರವಾನಗಿ
ಇದೆ. ಅದನ್ನು ಸರ್ಕಾರ ಪಡೆದಿಲ್ಲ. ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳ ಸಹಕಾರ ಇಲ್ಲದಿದ್ದರೆ ಈ ಹಂತಕ್ಕೆ ಔಷಧ ಸಫಲತೆ ಕಾಣುತ್ತಿರಲಿಲ್ಲ ಎಂದರು.
ಅನೇಕ ಕಾರಣಗಳಿಗೆ ನಮ್ಮಲ್ಲಿ ಆಯುರ್ವೇದದ ಕುರಿತು ಕೆಲವು ತಪ್ಪು ತಿಳಿವಳಿಕೆಗಳಿವೆ. ಅದರಿಂದ ಪ್ರಕ್ರಿಯೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿದೆ. ಇನ್ನೊಂದು ವಾರದಲ್ಲಿ ಸರ್ಕಾರ ಉಚಿತ ಔಷಧವನ್ನು ಪಡೆದು ಪ್ರಾಥಮಿಕ ಶಂಕಿತರಿಗೆ ರೋಗನಿರೋಧಕ ವರ್ಧನೆ ಔಷಧವೆಂದು ನೀಡುವ ವಿಶ್ವಾಸವಿದೆ ಎಂದು ಹೇಳಿದರು. ಬಿಎಂಸಿಆರ್ಐ ನೋಟಿಸ್ ಕುರಿತು ಪ್ರತಿಕ್ರಿಯಿಸಿ, ಆಯುರ್ವೇದವಿರಲಿ, ಅಲೋಪಥಿ ಯಿರಲಿ, ಹೋಮಿಯೋಪಥಿಯಿರಲಿ, ಸಂಶೋಧ ಕರಿಗೆ ಗೌರವ ನೀಡಬೇಕು. ನನ್ನ ಆಯುರ್ವೇಧ ಔಷಧ ಕುರಿತ ಸ್ಪಷ್ಟನೆ ಬೇಕಿದ್ದರೆ ನಾನೇ ನೀಡುತ್ತಿದ್ದೆ. ಅದನ್ನು ನೋಟಿಸ್ ರೂಪದಲ್ಲಿ ಹೊರಡಿಸಿ, 17 ದಿನವಾದರೂ ನನಗೆ ತಲುಪಿಸದೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಯಾವುದೇ ಔಷಧದಿಂದ ಪರಿಹಾರ ಸಿಗುತ್ತದೆ ಎಂದರೂ ಅದನ್ನು ಸ್ವಾಗತಿಸುವ ಮನೋಭಾವವನ್ನು ಎಲ್ಲರೂ
ಬೆಳೆಸಿಕೊಳ್ಳಬೇಕು. ಈಗಾಗಲೇ ಕ್ಲಿನಿಕಲ್ ಪ್ರಯೋಗ ನಡೆದಿದ್ದು, ಪರೀಕ್ಷೆ ಒಳಪಟ್ಟ 10 ಜನರು ಗುಣಮುಖರಾಗಿದ್ದಾರೆ. ಇದು ಸಣ್ಣ ವಿಚಾರವಲ್ಲ ಎಂದು ಹೇಳಿದರು.
ಭಯಭೀತರಾಗುವುದಕ್ಕಿಂತ ಎಚ್ಚರ ವಹಿಸುವುದು ಅತೀ ಅಗತ್ಯ. ರೋಗ ಬರುವ ಮೊದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ಆಯುರ್ವೇದದಿಂದ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆ ಯುವ ಶಕ್ತಿಯಿದೆ. ಅಲೋಪಥಿಗೊಂದು, ಆಯುರ್ವೇಧ ಕ್ಕೊಂದು ಮಾನದಂಡ ಬೇಡ. ಪ್ಲಾಸ್ಮಾ ಥೆರಪಿ ಒಬ್ಬರಿಗೆ ಮಾಡಿದ ತಕ್ಷಣ ಎಲ್ಲ ಕಡೆ ಧನಾತ್ಮಕ ಚರ್ಚೆ ನಡೆಯಿತು. ಆಯುರ್ವೇದಕ್ಕೆ ಮಾತ್ರ ಪ್ರಶ್ನೆಗಳು ಬರುವುದು ಸರಿಯಲ್ಲ ಎಂದರು.
ಔಷಧ ತಯಾರಿಕೆಯ ಸೂತ್ರ ಸರ್ಕಾರಕ್ಕೆ ಒಪ್ಪಿಸುವೆ ಸರ್ಕಾರ ಉಚಿತವಾಗಿ ಔಷಧ ವಿತರಣೆ ಕಾರ್ಯ ಆರಂಭಿಸಿದ ನಂತರ ಔಷಧ ತಯಾರಿಕೆಯ ಸೂತ್ರ ಹಾಗೂ ಪರವಾನಗಿಯನ್ನು ಸರ್ಕಾರಕ್ಕೆ ಒಪ್ಪಿಸಲಿದ್ದೇನೆ. ಸರ್ಕಾರವೇ ತಯಾರಿಸುವ ಅಥವಾ ಖಾಸಗಿ ಸಂಸ್ಥೆಗಳಿಗೆ ಉತ್ಪಾದನೆಗೆ ನೀಡುವವ ರೆಗೆ ಮಾತ್ರ ಔಷಧವನ್ನು ತಯಾರಿಸಿ ಮಾರಾಟ ಮಾಡುತ್ತೇನೆ. ಈಗಾಗಲೆ ನಾಲ್ಕು ಎಂಎನ್ಸಿಗಳು ಕೋಟ್ಯಂತರ ರೂ.ಗೆ ಔಷಧದ ಹಕ್ಕನ್ನು ಕೊಳ್ಳಲು ಬಂದಿದ್ದವು. ಆದರೆ, ಮೊದಲು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಾರಾಟ ಮಾಡಿಲ್ಲ ಎಂದು ಡಾ.ಗಿರಿಧರ ಕಜೆ ಹೇಳಿದರು.