ಇನ್ನೆರಡು ಡಿಸಿಎಂ ಹುದ್ದೆ ಮಾಧ್ಯಮ ಸೃಷ್ಟಿ: ಸವದಿ
Team Udayavani, Dec 16, 2019, 3:00 AM IST
ರಾಯಚೂರು: ರಾಜ್ಯದಲ್ಲಿ ಇನ್ನೆರಡು ಉಪ ಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರ ಸತ್ಯಕ್ಕೆ ದೂರ. ಅದು ಮಾಧ್ಯಮಗಳ ಸೃಷ್ಟಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸ್ಪಷ್ಟಪಡಿ ಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ಪುನಾರಚನೆಯಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದ ನಾಯಕರಿಗೆ ಅಸಮಾಧಾನ ಎನ್ನುವುದೆಲ್ಲ ಬರೀ ಊಹಾಪೋಹ. ನಾನು ದೆಹಲಿಗೆ ತೆರಳಿದ್ದು ಕೂಡ ಯಾವ ಸ್ಥಾನಮಾನಕ್ಕಾಗಿಯೂ ಅಲ್ಲ ಎಂದರು.
ಪೌರತ್ವ ತಿದ್ದುಪಡಿ ಮಸೂದೆಯಿಂದ ದೇಶದ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ಕಾಯ್ದೆ ಬಗ್ಗೆ ಕೆಲವರು ಗೊಂದಲ ಉಂಟು ಮಾಡುತ್ತಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ನೆರೆ ಹಾನಿಗೆ ಒಳಗಾದ ಸಂತ್ರಸ್ತರಿಗೆ ಕೇಂದ್ರದಿಂದ 2ನೇ ಹಂತದ ಪರಿಹಾರ ಬಂದ ಕೂಡಲೇ ಪರಿಹಾರ ಹಣ ಜಮಾ ಮಾಡಲಾಗುವುದು. ಸಾರಿಗೆ ಇಲಾಖೆಯಿಂದ 1200 ನೂತನ ಬಸ್ ಖರೀದಿಗೆ ಚಿಂತನೆ ನಡೆದಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಬಸ್ ನೀಡಲಾಗುವುದು ಎಂದರು.