ಬಳ್ಳಾರಿ ಇಬ್ಭಾಗ: ವಿಜಯನಗರ ಹೊಸ ಜಿಲ್ಲೆ; ದಶಕಗಳ ಹೋರಾಟಕ್ಕೆ ಮನ್ನಣೆ
Team Udayavani, Nov 19, 2020, 6:15 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಗಣಿನಾಡು ಬಳ್ಳಾರಿ ಜಿಲ್ಲೆ ಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಸಂಪುಟದಲ್ಲಿ ತಾತ್ವಿಕವಾಗಿ ಒಪ್ಪಿಗೆ ದೊರೆತಿದೆ. ಇದರಿಂದ ದಶಕಗಳ ಹೋರಾಟಕ್ಕೆ ಮೊದಲ ಜಯ ಸಿಕ್ಕಂತಾಗಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಹೊಸಪೇಟೆಯಲ್ಲಿ ಜನ ಸಂಭ್ರಮಿಸಿದರೆ, ಬಳ್ಳಾರಿಯಲ್ಲಿ ವಿರೋಧ ವ್ಯಕ್ತವಾಗಿದೆ.
ಪ್ರತ್ಯೇಕ ಜಿಲ್ಲೆ ರಚನೆಗೆ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಈಗ ಮತ್ತೂಮ್ಮೆ ಅಸಮಾಧಾನ ಹೊರಹಾಕಿದ್ದಾರೆ.
ವಿಜಯನಗರ ಜಿಲ್ಲೆ ರಚನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಪುಟ ಸಭೆಯ ಅನಂತರ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಹೇಳಿದರು. ವಿಜಯನಗರ ಜಿಲ್ಲೆ ರಚನೆಗೆ ಒಂದೂವರೆ ದಶಕದಿಂದ ಹೋರಾಟ ನಡೆಯುತ್ತಿತ್ತು. ಈಚೆಗಿನ ವರ್ಷಗಳಲ್ಲಿ ಆನಂದ್ ಸಿಂಗ್ ಹೋರಾಟಕ್ಕೆ ಬಲ ನೀಡಿದ್ದರು.
ಮೀಸಲಾತಿ ಹೆಚ್ಚಳಕ್ಕೆ ಉಪ ಸಮಿತಿ
ಪ. ಜಾತಿ ಮತ್ತು ಪ. ಪಂಗಡದವರ ಮೀಸಲಾತಿ ಪ್ರಮಾಣ ಹೆಚ್ಚಳ ಕೂಗಿಗೆ ರಾಜ್ಯ ಸರಕಾರ ಸ್ಪಂದಿಸಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂಬ ಈ ಪಂಗಡದವರ ಬೇಡಿಕೆ ಪರಿಶೀಲಿಸಿ ವರದಿ ನೀಡುವ ಸಲುವಾಗಿ ಸಂಪುಟ ಉಪ ಸಮಿತಿ ರಚನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಭೆಯ ಪ್ರಮುಖ ನಿರ್ಧಾರಗಳು
– ಡಿ. 7ರಿಂದ 15ರ ವರೆಗೆ ಚಳಿಗಾಲದ ಅಧಿವೇಶನ
– ಮರಾಠ ಅಭಿವೃದ್ಧಿ ಪ್ರಾಧಿಕಾರ ಬದಲಿಗೆ ಮರಾಠ ಸಮುದಾಯದ ನಿಗಮ ರಚನೆ
– 2021: 21 ಸಾರ್ವತ್ರಿಕ ರಜೆ, 19 ನಿರ್ಬಂಧಿತ ರಜೆ
– ದ.ಕ. ಜಿಲ್ಲೆಯ ಮೆನ್ನಬೆಟ್ಟು, ಕಿನ್ನಿಗೋಳಿ, ಕಟೀಲು ಗ್ರಾ.ಪಂ. ಸೇರಿಸಿ ಕಿನ್ನಿಗೋಳಿ ಪ. ಪಂ. ರಚನೆ.